ಡ್ರಗ್ಸ್ ಕೊಳ್ಳಲು ಹಣ ನೀಡದ ತಾಯಿಯನ್ನು ಒನಕೆಯಿಂದ ಬಡಿದು ಸಾಯಿಸಿದ ಪುತ್ರ
ಹೊಸದಿಲ್ಲಿ, ಅ.23: ಡ್ರಗ್ಸ್ ಖರೀದಿಸಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಸ್ವಂತ ತಾಯಿಯನ್ನೇ ಒನಕೆಯಿಂದ ಬಡಿದು ಸಾಯಿಸಿದ 22 ವರ್ಷದ ಮಗ ನಂತರ ಪೊಲೀಸರ ಕಣ್ತಪ್ಪಿಸುವ ಸಲುವಾಗಿ ನಿರಾಶ್ರಿತನ ಮಾರುವೇಷದಲ್ಲಿ ಉತ್ತರ ಪ್ರದೇಶದ ಮೋದಿ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಪೊಲೀಸರು ಅಲ್ಲಿಂದ ಆತನನ್ನು ಬಂಧಿಸಿದ್ದಾರೆ.
ಆರೋಪಿ ಆಶುತೋಷ್ ಉದ್ದನೆಯ ಗಡ್ಡ ಬೆಳಸಿ ಹಾಗೂ ದೊಡ್ಡ ಮೀಸೆಯನ್ನಿಟ್ಟುಕೊಂಡು ಮೋದಿನಗರದ ದೇವಸ್ಥಾನ, ರೈಲ್ವೆ ನಿಲ್ದಾಣಗಳ ಹೊರಗೆ ಭಿಕ್ಷೆ ಬೇಡುತ್ತಿದ್ದ. ದಿಲ್ಲಿಯ ಮೀತ್ ನಗರದಲ್ಲಿ ವಾಸವಾಗಿದ್ದ ಆತ ಸೆಪ್ಟೆಂಬರ್ 17ರಂದು ತನ್ನ 50 ವರ್ಷದ ತಾಯಿ ಶಿಕ್ಷಾ ದೇವಿಯ ಮೇಲೆ ಬರ್ಬರ ಹಲ್ಲೆಗೈದಿದ್ದ. ನಾಲ್ಕು ದಿನಗಳ ನಂತರ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ಸಿಸಿಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ ಶಿಕ್ಷಾ ದೇವಿ ಮೇಲೆ ಹಲ್ಲೆ ನಡೆದ ದಿನ ಮನೆಗೆ ಬಂದಿದ್ದ ಕಡೆಯ ವ್ಯಕ್ತಿ ಅಶುತೋಷ್ ಆಗಿದ್ದನೆಂದು ತಿಳಿದು ಬಂದಿತ್ತು. ಆತನ ಹೆಸರು ಹಾಗೂ ಮಾಹಿತಿಯಿರುವ ಸುಮಾರು 3,000 ಕರಪತ್ರಗಳನ್ನು ಪೊಲಿಸರು ಎಲ್ಲೆಡೆ ವಿತರಿಸಿದ ನಂತರ ಆತ ಮೋದಿ ನಗರದಲ್ಲಿರುವ ಮಾಹಿತಿ ದೊರೆತು ಐದು ಪೊಲೀಸ್ ತಂಡಗಳು ಅಲ್ಲಿಗೆ ಧಾವಿಸಿ ಆತನನ್ನು ಪತ್ತೆ ಹಚ್ಚಿದ್ದವು. ತನ್ನ ತಾಯಿಯನ್ನು ಕೊಲ್ಲಲು ಬಯಸಿದ ಆಯುಧವನ್ನು ತಾನೆಸೆದ ಸ್ಥಳವನ್ನೂ ಆತ ಪೊಲೀಸರಿಗೆ ತೋರಿಸಿದ್ದಾನೆ.