ಉಡುಪಿ: ರಥಬೀದಿಯಲ್ಲಿನ ವ್ಯಾಪಾರಸ್ಥರ ಪೆಟ್ಟಿಗೆ ತೆರವಿಗೆ ಒತ್ತಾಯ
ಉಡುಪಿ, ಅ.23: ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವ್ಯಾಪಾರಸ್ಥರು ಸ್ಥಳ ಆಯ್ದುಕೊಳ್ಳಲು ಗುರುತಿಗಾಗಿ ಹಾಕಿರುವ ಪ್ಲಾಸ್ಟಿಕ್ ಪೆಟ್ಟಿಗೆಗಳಿಂದ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ರಥಬೀದಿಯಲ್ಲಿ ನಡೆದಾಡಲು ತೊಂದರೆಯಾಗುತ್ತಿದ್ದು, ಕೂಡಲೇ ಈ ಪೆಟ್ಟಿಗೆಗಳನ್ನು ತೆರವು ಗೊಳಿಸಲು ಕ್ರಮ ಜರಗಿಸಬೇಕು ಎಂದು ಸಾವಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ದೀಪಾವಳಿ ಹಬ್ಬದ ಪ್ರಯುಕ್ತ ಹೂವು, ಹಣತೆ, ಹಣ್ಣುಹಂಪಲು, ಮೊದಲಾದ ವ್ಯಾಪಾರಸ್ಥರು ಮುಂಚಿತವಾಗಿ ಸ್ಥಳ ಕಾಯ್ದಿರಿಸಿರುವ ಕುರುಹುಗಳು ಇದಾಗಿದ್ದು, ದೀಪಾವಳಿಗೆ ಹಲವು ದಿನಗಳು ಇರುವಾಗಲೇ ಈ ಸ್ಥಳ ಆಯ್ಕೆ ಸರಿಯಲ್ಲ. ಈ ಪೆಟ್ಟಿಗೆಗಳು ರಥಬೀದಿಯಲ್ಲಿ ಕಳೆದ ಹದಿನೈದು ದಿನಗಳಿಂದ ಇವೆ. ಈ ಪೆಟ್ಟಿಗೆಗಳಿಗೆ ಬೀದಿ ನಾಯಿಗಳು ಮೂತ್ರ ವಿಸರ್ಜನೆ ಮಾಡುವುದ ರಿಂದ ಮುಂದೆ ಇದೇ ಪೆಟ್ಟಿಗೆಗಳಲ್ಲಿ ಪೂಜಾ ಸಾಮಾಗ್ರಿಗಳನ್ನು ಹಾಕಿ ಮಾರಾಟ ಮಾಡಲಾಗುತ್ತದೆ.
ಬೆಳಗಿನ ಜಾವ ಸ್ವಾಮಿಜಿಗಳು ಕೃಷ್ಣಮಠದ ದೇವರ ದರ್ಶನಕ್ಕೆ ಹೋಗುವ ಸಂದರ್ಭವು ಇದ್ದು, ನಸುಕಿನ ಕತ್ತಲಲ್ಲಿ ಪೆಟ್ಟಿಗೆಗಳು ಗೋಚರ ಆಗದೆ ಎಡವಿ ಬೀಳುವ ಸಾಧ್ಯತೆಗಳಿವೆ. ಆದುದರಿಂದ ನಗರಸಭೆಯವರು ತಕ್ಷಣ ಜನ ಸಂಚಾರಕ್ಕೆ ಅಡಚಣೆಯಾಗುವ ಈ ಪೆಟ್ಟಿಗೆಗಳನ್ನು ತೆರವುಗೊಳಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ