ಬೆಂಗಳೂರಿನ ಐಟಿ ಕಚೇರಿಗೆ ಹುಸಿ ಬಾಂಬ್ ಕರೆ
ಬಾಂಬ್ ನಿಷ್ಕ್ರಿಯ ದಳ, ಶ್ವಾನದಳಗಳಿಂದ ಪರಿಶೀಲನೆ
![ಬೆಂಗಳೂರಿನ ಐಟಿ ಕಚೇರಿಗೆ ಹುಸಿ ಬಾಂಬ್ ಕರೆ ಬೆಂಗಳೂರಿನ ಐಟಿ ಕಚೇರಿಗೆ ಹುಸಿ ಬಾಂಬ್ ಕರೆ](https://www.varthabharati.in/sites/default/files/images/articles/2019/10/24/216238-1571920470.jpg)
ಬೆಂಗಳೂರು, ಅ.24: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳಗಳು ಸ್ಥಳ ಪರಿಶೀಲನೆ ನಡೆಸಿದಾಗ ಯಾವುದೇ ಬಾಂಬ್ ಪತ್ತೆಯಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಐಟಿ ಇಲಾಖೆಯ ಉಪ ಆಯುಕ್ತರಿಗೆ ರಾತ್ರಿ 10.45ರ ವೇಳೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, ಕೂಡಲೇ ಅವರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೂರ್ವ ವಿಭಾಗದ 200ಕ್ಕೂ ಹೆಚ್ಚು ಪೊಲೀಸರು ಕಚೇರಿ ಬಳಿ ಧಾವಿಸಿ ಭದ್ರತೆ ಕೈಗೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದಾಗ ಹುಸಿ ಕರೆ ಎಂಬುದು ಗೊತ್ತಾಗಿದೆ.
ಪ್ರಾಥಮಿಕ ಮಾಹಿತಿ ಮೇರೆಗೆ ಪ್ರೋಟಾನ್ ಡಾರ್ಕ್ನೆಟ್ ಮೂಲಕ ಇ-ಮೇಲ್ ಕಳುಹಿಸಲಾಗಿದ್ದು, ಇಲಾಖೆಯ ಉದ್ಯೋಗಿ ಗೋವಿಂದ್ ಎಂಬಾತ ಬೆದರಿಕೆಯ ಇ-ಮೇಲ್ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ. ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಉದ್ಯೋಗಿಗಳು ಕಚೇರಿಯೊಳಗೆ ಹೋಗಲು ಆತಂಕ ಪಡುತ್ತಿದ್ದರು. ಅವರಿಗೆ ಪೊಲೀಸರು ಹಾಗೂ ಇಲಾಖಾಧಿಕಾರಿಗಳು ಧೈರ್ಯ ತುಂಬಿ ಕೆಲಸಕ್ಕೆ ಕಳುಹಿಸಿದರು.
ಈ ಹಿಂದೆಯೂ ಐಟಿ ಕಚೇರಿಗೆ ಹುಸಿ ಬಾಂಬ್ ಕರೆ ಬಂದಿತ್ತು. 1991-92ರಲ್ಲಿ ಒಂದು ದಿನ ಬೆಳಗ್ಗೆ 11.30ರ ಹೊತ್ತಿಗೆ ಇದೇ ರೀತಿ ಫೋನ್ ಕರೆ ಬಂದು ಗೊಂದಲ ಉಂಟಾಗಿತ್ತು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.