ಮಹಾರಾಷ್ಟ್ರ, ಹರ್ಯಾಣಗಳಲ್ಲಿ ಬಿಜೆಪಿಯದೇ ಸರಕಾರ: ಸಚಿವ ಕೋಟ ವಿಶ್ವಾಸ
ಉಡುಪಿ, ಅ. 24: ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಿದೆ. ಎರಡೂ ರಾಜ್ಯ ಗಳಲ್ಲಿ ಪೂರ್ಣ ಬಹುಮತದೊಂದಿಗೆ ಪಕ್ಷ ಸರಕಾರ ರಚಿಸಲಿದೆ ಎಂಬ ವಿಶ್ವಾಸವನ್ನು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡ ಜಲಸಾರಿಗೆ ಸಚಿವ ಕೋಟ ಶಿ್ರೀನಿವಾಸ ಪೂಜಾರಿ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಗುರುವಾರ ನಡೆದ ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಸರಕಾರ ರಚಿಸುತ್ತದೆ.ಈ ಬಗ್ಗೆ ಯಾವುದೇ ಗೊಂದಲ ಬೇಡ. ಮಹಾರಾಷ್ಟ್ರದಲ್ಲಿ ಸಂಪೂರ್ಣ ಬಹುಮತವಿದೆ. ಹರಿಯಾಣದಲ್ಲಿ ಪಕ್ಷೇತರರೊಂದಿಗೆ ಸೇರಿ ರಚಿಸುತ್ತೇವೆ ಎಂದರು.
ರಾಜ್ಯದಲ್ಲಿ 15 ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ ಎಂದ ಕೋಟ, ಡಿಕೆಶಿಯ ಇಡಿ ಪ್ರಕರಣ ಹಾಗೂ ಅವರ ಬಿಡುಗಡೆ ಸೇರಿದಂತೆ ಇತರ ಯಾವುದೇ ವಿಷಯ ಗಳು ಕರ್ನಾಟಕ ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಬಿಜೆಪಿ, ಗಾಂಧಿ ಅವರ ಪಥದಲ್ಲಿ ಸಾಗುತ್ತಿದೆ. ಆದರೆ 100 ವರ್ಷ ಗಳಿಗೂ ಮೀರಿದ ಇತಿಹಾಸವಿರುವ ಕಾಂಗ್ರೆಸ್ ತನ್ನ ವಿಚಾರಧಾರೆ ಯನ್ನು, ತನ್ನ ಜವಾಬ್ದಾರಿಯನ್ನು ಮೀರಿ ವರ್ತಿಸುತ್ತಿದೆ ಎಂದು ಕೋಟ, ಡಿಕೆಶಿ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿರುವುದಕ್ಕೆ ಸಂಭ್ರಮಾ ಚರಣೆಯಲ್ಲಿ ತೊಡಗಿದ ಕಾಂಗ್ರೆಸ್ನ್ನು ಟೀಕಿಸಿ ನುಡಿದರು.
ನೆರೆ ಪರಿಹಾರಕ್ಕೆ ತಡೆ ಇಲ್ಲ: ರಾಜ್ಯದಲ್ಲಿ ನೆರೆ ಪರಿಹಾರ ರಾಜ್ಯ ಸರಕಾರ ಹಿಂದೆ ಸರಿದಿಲ್ಲ. ನೆರೆ ಪರಿಹಾರ ಕಾರ್ಯಕ್ಕೆ ಉಪಚುನಾವಣೆಯಿಂದ ಯಾವುದೇ ಅಡ್ಡಿಯಾಗುವುದಿಲ್ಲ. 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಈ ಮೊದಲೇ ಪ್ರವಾಹ ಬಂದಿತ್ತು. ಈಗ ಮತ್ತೆ ಮೂರು ದಿನಗಳಿಂದ ಮಳೆಯಾ ಗುತ್ತಿದೆ. ಇವುಗಳಿಗೆ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು.
ಪರಿಹಾರ ಕಾರ್ಯದಲ್ಲಿ ಶಾಸಕರು, ಉಸ್ತುವಾರಿ ಸಚಿವರಲ್ಲದೇ ಸ್ವತಹ ಮುಖ್ಯಮಂತ್ರಿಗಳೇ ಕಾರ್ಯೋನ್ಮುಖರಾಗಿದ್ದಾರೆ. ಹೀಗಾಗಿ ಪ್ರವಾಹ ಸಂತ್ರಸ್ಥರಿಗೆ ಯಾವುದೇ ರೀತಿ ಭಯ ಬೇಡ ಎಂದವರು ಹೇಳಿದರು.
ಹಿಂದಿನ ಸರಕಾರ ಲೈಟ್ ಫಿಶಿಂಗ್ ನಿಷೇಧ ಮಾಡಿದ್ದು, ನಾವು ಯಥಾಸ್ಥಿತಿ ಕಾಪಾಡಿಕೊಂಡಿದ್ದೇವೆ. ಪರ್ಸಿನ್ ಮೀನುಗಾರರಿಗೆ ನಷ್ಟ ಆಗಿರುವುದು ನಿಜ. ಅದನ್ನು ಸರಿಪಡಿಸಲು ಕಾನೂನು ತೊಡಕಿದೆ ಎಂದು ಸಚಿವರು ನುಡಿದರು.







