ವಿದೇಶಿ ಹಾಲು ಆಮದು ನಿಷೇಧಕ್ಕೆ ಕೇಂದ್ರದೊಂದಿಗೆ ಮಾತುಕತೆ: ಸಿಎಂ ಯಡಿಯೂರಪ್ಪ
ಜಿಕೆವಿಕೆ ಕೃಷಿಮೇಳ-2019ಕ್ಕೆ ಚಾಲನೆ
![ವಿದೇಶಿ ಹಾಲು ಆಮದು ನಿಷೇಧಕ್ಕೆ ಕೇಂದ್ರದೊಂದಿಗೆ ಮಾತುಕತೆ: ಸಿಎಂ ಯಡಿಯೂರಪ್ಪ ವಿದೇಶಿ ಹಾಲು ಆಮದು ನಿಷೇಧಕ್ಕೆ ಕೇಂದ್ರದೊಂದಿಗೆ ಮಾತುಕತೆ: ಸಿಎಂ ಯಡಿಯೂರಪ್ಪ](/images/placeholder.jpg)
ಬೆಂಗಳೂರು, ಅ.24: ಹಾಲು ಉತ್ಪಾದಕರಿಗೆ ಮಾರಕವಾಗುವಂತಹ ವಿದೇಶಿ ಹಾಲು ಹಾಗೂ ಹಾಲು ಉತ್ಪನ್ನಗಳ ಆಮದು ಮಾಡಲು ಮುಂದಾಗಿರುವುದನ್ನು ಹಿಂಪಡೆಯುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಗುರುವಾರ ನಗರದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ಕೃಷಿಮೇಳ-2019ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೊರ ದೇಶಗಳಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ದೇಶದ ರೈತರ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದಾಗಿ, ಇದನ್ನು ಕೈಬಿಡಬೇಕು ಎಂದು ಈಗಾಗಲೇ ಕೇಂದ್ರಕ್ಕೆ ದೀರ್ಘವಾದ ಪತ್ರವನ್ನು ಬರೆಯಲಾಗಿದೆ ಎಂದು ಹೇಳಿದರು.
ಈ ಸಂಬಂಧ ಮುಂದಿನ ಒಂದು ವಾರದಲ್ಲಿ ರಾಜ್ಯದ ಸಂಸದರೊಂದಿಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ರಾಜ್ಯದ ರೈತರು ಆತಂಕ ಪಡಬೇಕಾದ ಅಗತ್ಯವಿಲ್ಲ. ನಿಮ್ಮ ರಕ್ಷಣೆಗೆ ನಾವಿದ್ದೇವೆ. ಕೇಂದ್ರದೊಂದಿಗೆ ರಾಜ್ಯದ ಪರವಾಗಿ ನಾವು ವಕಾಲತ್ತು ವಹಿಸುತ್ತೇವೆ ಎಂದರು.
ಇತ್ತೀಚಿಗೆ ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ, ಮತ್ತೊಂದು ಕಡೆ ಬರದಿಂದಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಅವರ ನೆರವಿಗೆ ಧಾವಿಸಲು ಸರಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ನೆರೆ ಪರಿಹಾರಕ್ಕಾಗಿ ಅಪಾರವಾದ ಹಣ ವಿನಿಯೋಗಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.
ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂ., ಆರ್ಥಿಕ ಸಹಾಯ, ತಕ್ಷಣ ಪರಿಹಾರವಾಗಿ 10 ಸಾವಿರ ನೀಡಲಾಗುತ್ತಿದೆ. ಸಂತ್ರಸ್ತರಿಗಾಗಿ ಶೆಡ್ಗಳನ್ನು ಸರಕಾರವೇ ನಿರ್ಮಾಣ ಮಾಡಿದೆ. ಬಾಡಿಗೆ ಮನೆಗಳಲ್ಲಿ ಇರುವುದಾದರೆ ಒಂದು ವರ್ಷದವರೆಗೆ ತಿಂಗಳಿಗೆ ಐದು ಸಾವಿರ ಬಾಡಿಗೆ ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆಯಡಿ ವಾರ್ಷಿಕ ಮೂರು ಕಂತಿನಲ್ಲಿ 6 ಸಾವಿರ ನೀಡಲಾಗುತ್ತಿದೆ. ಈಗಾಗಲೇ ಮೊದಲ ಕಂತಿನ ಹಣ ನೀಡಿದ್ದು, ಅದಕ್ಕಾಗಿ 480 ಕೋಟಿ ಹಣ ಒದಗಿಸಲಾಗಿದೆ ಎಂದರು.
ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷಣ ಸವದಿ ಮಾತನಾಡಿ, ಕೃಷಿ ವಿಜ್ಞಾನಿಗಳು ಲಾಭದಾಯಕ ತಳಿಗಳ ಸಂಶೋಧನೆಗಳ ಬದಲಿಗೆ, ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಂದಿನ ಕೃಷಿಯಲ್ಲಿ ರಸಗೊಬ್ಬರ, ಕ್ರಿಮಿನಾಶಕಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಅದರ ಬದಲಿಗೆ, ಸಾವಯವ ಕೃಷಿಯನ್ನು ಹೆಚ್ಚು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕ್ಯಾನ್ಸರ್, ಮಧುಮೇಹ ಸೇರಿದಂತೆ ಅನೇಕ ರೋಗಗಳು ಅಧಿಕವಾಗುತ್ತಿವೆ. ಇದಕ್ಕೆ ನಮ್ಮ ಆಹಾರ ಪದ್ಧತಿಯೇ ಕಾರಣವಾಗಿದೆ. ಆದುದರಿಂದಾಗಿ, ರಸಗೊಬ್ಬರ ರಹಿತ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಸ ಸಂಶೋಧನೆಗಳ ಅಗತ್ಯವಿದೆ ಎಂದು ತಿಳಿಸಿದರು.
ಮಾಜಿ ಕೃಷಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ರಾಜ್ಯದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ 14 ವರ್ಷಗಳ ಕಾಲ ನಿರಂತರವಾಗಿ ಬರದಿಂದ ತತ್ತರಿಸಿದೆ. ಇದರ ನಡುವೆ ಎನ್ಎಸ್ಎಸ್ಒ ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶದ ಜನರ ಆದಾಯ ಕುಸಿತವಾಗಿದೆ ಎಂದು ಹೇಳುತ್ತಿರುವುದು ಅಘಾತಕಾರಿ ಸಂಗತಿ ಎಂದರು.
ಇದೇ ವೇಳೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ, ಸಿ.ಭೈರೇಗೌಡ ರಾಜ್ಯ ಮಟ್ಟದ ರೈತ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರಿಗೆ ಅಲ್ಪಮಟ್ಟಿಗೆ ಹೈನುಗಾರಿಕೆ ಆದಾಯ ಮೂಲವಾಗಿದೆ. ಇದೀಗ ಕೇಂದ್ರ ಸರಕಾರ ವಿದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ರೈತರ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು.
-ಕೃಷ್ಣಭೈರೇಗೌಡ, ಮಾಜಿ ಸಚಿವ ಹಾಗೂ ಶಾಸಕ
ಹೊಸ ತಳಿಗಳ ಬಿಡುಗಡೆ
ಭತ್ತ : ಗಂಗಾವತಿ ಸೋನಾ, ಅಲಸಂಡೆ : (ಪಿ.ಜಿ.ಸಿ.ಪಿ-6), ಉದ್ದು : ಎಲ್ಬಿಜಿ 791, ಸೂರ್ಯಕಾಂತಿ : ಕೆಬಿಎಸ್ಹೆಚ್-78, ಕಬ್ಬು : ಸಿ.ಒ.ವಿ.ಸಿ -16061, ಕಬ್ಬು: ಸಿ.ಒ.ವಿ.ಸಿ -16062, ಹಲಸು : ಲಾಲ್ಬಾಗ್ ುಧುರ ಬಿಡುಗಡೆ ಮಾಡಲಾಯಿತು.