ಜಮ್ಮುಕಾಶ್ಮೀರದ ಮಾನವ ಹಕ್ಕು, ಮಾಹಿತಿ ಹಕ್ಕು ಆಯೋಗಳ ಬರ್ಖಾಸ್ತು !
ಹೊಸದಿಲ್ಲಿ/ಶ್ರೀನಗರ, ಅ. 24: ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರದಿಂದ ನೇರವಾಗಿ ನಿಯಂತ್ರಿಸಲ್ಪಡುವ ಜಮ್ಮು ಹಾಗೂ ಕಾಶ್ಮೀರ ಆಡಳಿತವು ಮಾನವ ಹಕ್ಕುಗಳು, ಮಾಹಿತಿ ಹಕ್ಕು, ಅಂಗವಿಕಲರ ಹಕ್ಕು ಹಾಗೂ ಸರಕಾರಿ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ನಿರ್ವಹಿಸುವ ಆಯೋಗಗಳ ಸಹಿತ 7 ಆಯೋಗಳನ್ನು ಬರ್ಖಾಸ್ತುಗೊಳಿಸಲಿದೆ.
ಅಕ್ಟೋಬರ್ 31ರಿಂದ ಜಾರಿಗೆ ಬರುವಂತೆ 7 ರಾಜ್ಯ ಆಯೋಗಗಳನ್ನು ಬರ್ಖಾಸ್ತುಗೊಳಿಸಲಾಗುವುದು ಎಂದು ಅಧಿಕೃತ ಆದೇಶ ಬುಧವಾರ ಹೇಳಿದೆ. ಆದರೆ, ಈ ಆಯೋಗಗಳನ್ನು ಬರ್ಖಾಸ್ತುಗೊಳಿಸಲು ಯಾವುದೇ ಕಾರಣ ನೀಡಿಲ್ಲ.
ಜಮ್ಮು ಹಾಗೂ ಕಾಶ್ಮೀರ ರಾಜ್ಯ ಮಾನವ ಹಕ್ಕು ಆಯೋಗ (ಎಸ್ಎಚ್ಆರ್ಸಿ), ರಾಜ್ಯ ಮಾಹಿತಿ ಆಯೋಗ (ಎಸ್ಐಸಿ), ರಾಜ್ಯ ಗ್ರಾಹಕರ ಸಮಸ್ಯೆಗಳ ಪರಿಹಾರ ಆಯೋಗ (ಎಸ್ಸಿಡಿಆರ್ಸಿ), ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ (ಎಸ್ಇಆರ್ಸಿ), ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ರಾಜ್ಯ ಆಯೋಗ (ಎಸ್ಸಿಪಿಡಬ್ಲ್ಯುಸಿಆರ್), ಅಂಗವಿಕಲ ವ್ಯಕ್ತಿಗಳ ರಾಜ್ಯ ಆಯೋಗ (ಎಸ್ಸಿಪಿಡಬ್ಲುಡಿ), ರಾಜ್ಯ ಉತ್ತರದಾಯಿ ಆಯೋಗ (ಎಸ್ಎಸಿ) ಬರ್ಖಾಸ್ತುಗೊಳಿಸಲಾಗುವ ಆಯೋಗಗಳು.
ಜಮ್ಮು ಹಾಗೂ ಕಾಶ್ಮೀರದ ಮರು ನಿರ್ಮಾಣ ಕಾಯ್ದೆ-2019ರ ಅಡಿಯಲ್ಲಿ ಈ ಆಯೋಗಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಬರ್ಖಾಸ್ತುಗೊಳಿಸ ಲಾಗಿದೆ ಎಂದು ರಾಜ್ಯ ಸಾಮಾನ್ಯ ಆಡಳಿತ ಇಲಾಖೆ ನೀಡಿದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದಂತೆ ಈ ಎಲ್ಲ ಆಯೋಗಗಳ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಎಲ್ಲ ಪದಾಧಿಕಾರಿಗಳ ಅಧಿಕಾರ ಅಕ್ಟೋಬರ್ 31ರಂದು ಅಂತ್ಯಗೊಳ್ಳಲಿದೆ. ಅದೇ ಅಕ್ಟೋಬರ್ 31ರಂದು ರಾಜ್ಯ ಜಮ್ಮು ಹಾಗೂ ಕಾಶ್ಮಿರ, ಲಡಾಕ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾಗಲಿದೆ.
ಪೀಠೋಪಕರಣ ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳ ಸಹಿತ ಕಚೇರಿ ಕಟ್ಟಡಗಳ ಅಧಿಕಾರವನ್ನು ಕಟ್ಟಡ ಹಾಗೂ ನಿವೇಶನಗಳ ಇಲಾಖೆಗೆ ವರ್ಗಾಯಿಸುವಂತೆ ಸಾಮಾನ್ಯ ಆಡಳಿತ ಇಲಾಖೆ 7 ಆಯೋಗಗಳ ಕಾರ್ಯದರ್ಶಿಗಳಿಗೆ ಆದೇಶಿಸಿದೆ.
ಆಯೋಗಗಳ ಎಲ್ಲ ದಾಖಲೆಗಳನ್ನು ಕಾರ್ಯದರ್ಶಿಗಳು ಸಂಬಂಧಿಸಿದ ಇಲಾಖೆಗಳಿಗೆ ವರ್ಗಾಯಿಸಲಿದ್ದಾರೆ ಎಂದು ಆದೇಶ ಹೇಳಿದೆ.