ನ್ಯಾಯಪೀಠದಲ್ಲಿ ಯಾವ ನ್ಯಾಯಾಧೀಶರು ಇರಬೇಕೆಂದು ಕಕ್ಷಿಗಾರರು ಹೇಳುವಂತಿಲ್ಲ: ನ್ಯಾ. ಅರುಣ್ ಮಿಶ್ರಾ

ಹೊಸದಿಲ್ಲಿ, ಅ.24: ತಾನು ಈ ಹಿಂದೆ ನೀಡಿದ್ದ ತೀರ್ಪಿನ ನಿಖರತೆಯನ್ನು ಪರಿಶೀಲಿಸುವ ವಿಸ್ತೃತ ಪೀಠದ ಸದಸ್ಯತ್ವದಿಂದ ನ್ಯಾಯಾಧೀಶರು ಹಿಂದೆ ಸರಿಯುವ ಅಗತ್ಯವಿಲ್ಲ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.
2013ರ ಭೂಸ್ವಾಧೀನ ಕಾಯ್ದೆಯ 24ನೇ ಪರಿಚ್ಛೇದದ ಬಗ್ಗೆ ನ್ಯಾ. ಅರುಣ್ ಮಿಶ್ರಾ ಫೆ.8ರಂದು ನೀಡಿದ್ದ ತೀರ್ಪಿನ ನಿಖರತೆಯನ್ನು ಪರಿಶೀಲಿಸುವ ವಿಸ್ತೃತ ಪೀಠದ ನೇತೃತ್ವವನ್ನು ಸ್ವತಃ ನ್ಯಾ. ಮಿಶ್ರಾ ವಹಿಸಿದ್ದರು. ಇದನ್ನು ಆಕ್ಷೇಪಿಸಿದ್ದ ಕೆಲವರು, ತಾವೇ ನೀಡಿದ್ದ ತೀರ್ಪನ್ನು ಪರಿಶೀಲಿಸುವ ಪೀಠದ ನೇತೃತ್ವವನ್ನು ಮಿಶ್ರಾ ವಹಿಸಿರುವುದು ಸರಿಯಲ್ಲ. ಇದರಿಂದ ಪಕ್ಷಪಾತಕ್ಕೆ ಆಸ್ಪದ ನೀಡಿದಂತಾಗುವುದು ಎಂದು ತಿಳಿಸಿ, ವಿಚಾರಣೆಯಿಂದ ಹಿಂದಕ್ಕೆ ಸರಿಯುವಂತೆ ಒತ್ತಾಯಿಸಿ ಅರ್ಜಿ ದಾಖಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠ , ಈ ಹಿಂದೆ ನೀಡಿದ್ದ ತೀರ್ಪಿನ ಮರುಪರಿಶೀಲನೆ ನಡೆಸುವ ಪೀಠದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಇರಬಾರದೆಂದು ಹೇಳುವಂತಿಲ್ಲ. ಹೀಗೆ ಮಾಡಿದರೆ, ಯಾವೊಬ್ಬ ನ್ಯಾಯಾಧೀಶರು ತೀರ್ಪು ಮರುಪರಿಶೀಲನೆ ಕೋರಿದ ಅರ್ಜಿ ಅಥವಾ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಕೋರುವ ಅರ್ಜಿಯನ್ನು ಪರಿಶೀಲಿಸಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿ ಪರಿಶೀಲನೆ ನಡೆಸುವ ನ್ಯಾಯಪೀಠದಲ್ಲಿ ಯಾರೆಲ್ಲಾ ಇರಬೇಕು ಎಂದು ಕಕ್ಷಿಗಾರ ನಿರ್ಧರಿಸುವಂತಿಲ್ಲ ಎಂದು ನ್ಯಾ. ಅರುಣ್ ಮಿಶ್ರಾ ಹೇಳಿದ್ದಾರೆ. ಈ ಹೇಳಿಕೆಗೆ ನ್ಯಾಯಪೀಠದ ಇತರ ನಾಲ್ವರು ನ್ಯಾಯಾಧೀಶರೂ ಸಮ್ಮತಿ ಸೂಚಿಸಿದ್ದಾರೆ.
ವಿಚಾರಣೆ ನಡೆಸುವುದರಿಂದ ಹಿಂದಕ್ಕೆ ಸರಿಯಬೇಕೆಂಬ ಕಕ್ಷಿಗಾರರ ಆಶಯಕ್ಕೆ ಸಮ್ಮತಿಸಿದರೆ ಅದು ನ್ಯಾಯಾಂಗ ಸ್ವಾತಂತ್ರ್ಯದ ಮರಣ ಗಂಟೆಯಾಗಬಹುದು. ತೀರ್ಪನ್ನು ಘೋಷಿಸುವುದು ನ್ಯಾಯಾಧೀಶರ ಕರ್ತವ್ಯವಾಗಿದೆ. ತಾನು ವಿಚಾರಣೆಯಿಂದ ಹಿಂದೆ ಸರಿದರೆ ಅದೊಂದು ಗಂಭೀರ ಪ್ರಮಾದವಾಗಬಹುದು. ಸಮಗ್ರವಾಗಿ ಹಾಗೂ ತನಗೆ ಲಭ್ಯವಿರುವ ಬೌದ್ಧಿಕ ಸಾಮರ್ಥ್ಯವನ್ನು ಬಳಸಿಕೊಂಡು ತಾನು ನಿಷ್ಪಕ್ಷಪಾತವಾಗಿ ನ್ಯಾಯ ಒದಗಿಸಬಲ್ಲೆನೇ ಎಂಬುದು ಓರ್ವ ನ್ಯಾಯಾಧೀಶನಿಗೆ ಎದುರಾಗುವ ಅಂತಿಮ ಪರೀಕ್ಷೆಯಾಗಿದೆ. ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸುವಾಗ ಆತನಿಗೆ ನ್ಯಾಯ ಒದಗಿಸುವ ಕರ್ತವ್ಯ ವಹಿಸಲಾಗುತ್ತದೆ. ಕರ್ತವ್ಯದಿಂದ ಆತ ಹಿಂದೆ ಸರಿಯಬಾರದು. ಇಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯಿದೆ. ಜನಸಾಮಾನ್ಯರು ನ್ಯಾಯಾಂಗದ ಮೇಲಿಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ತರಬಾರದು . ಅಪರಾಧ ನಿರ್ಣಯದ ವಿಷಯದಲ್ಲಿ ಸ್ಥಿರ ಸಂಕಲ್ಪ ಹೊಂದಿರುವ ನ್ಯಾಯಾಧೀಶನ , ತನ್ನನ್ನು ವಿಚಾರಣೆಯಿಂದ ಹೊರಗಿಡಬೇಕೆಂಬ ಅರ್ಜಿಯ ಕುರಿತು ನಡೆಯುವ ಸುದೀರ್ಘ ವಿಚಾರಣೆಯಿಂದ ವಿಚಲಿತನಾಗುವುದಿಲ್ಲ ಎಂದು ನ್ಯಾ. ಮಿಶ್ರಾ ಹೇಳಿದ್ದಾರೆ.
ತಾವೇ ನೀಡಿದ್ದ ತೀರ್ಪನ್ನು ನ್ಯಾಯಾಧೀಶರು ಪರಿಶೀಲನೆಯ ಸಂದರ್ಭ ತಳ್ಳಿಹಾಕಿದ ಹಲವು ಉದಾಹರಣೆಗಳಿವೆ. ನ್ಯಾಯಾಧೀಶರು ತಮ್ಮ ಹಿಂದಿನ ತಪ್ಪನ್ನು ಸರಿಪಡಿಸುವವರು. ತೀರ್ಪು ಎಂಬುದು ತಂಗುವ ಸ್ಥಳವಲ್ಲ, ಅದು ಮೆಟ್ಟಿಲಾಗಿದೆ ಎಂದು ನ್ಯಾ. ಮಿಶ್ರಾ ಹೇಳಿದ್ದಾರೆ.







