'ವಿಪತ್ತು ನಿರ್ವಹಣೆಯಲ್ಲಿ ಸರಕಾರ ವಿಫಲ': ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಆಕ್ರೋಶ
![ವಿಪತ್ತು ನಿರ್ವಹಣೆಯಲ್ಲಿ ಸರಕಾರ ವಿಫಲ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಆಕ್ರೋಶ ವಿಪತ್ತು ನಿರ್ವಹಣೆಯಲ್ಲಿ ಸರಕಾರ ವಿಫಲ: ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಆಕ್ರೋಶ](https://www.varthabharati.in/sites/default/files/images/articles/2019/10/25/216324-1571942272.jpeg)
ಬೆಂಗಳೂರು, ಅ.24: ಬರಗಾಲ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರು ಶಿಬಿರಗಳನ್ನು ಸ್ಥಾಪಿಸುವಲ್ಲಿ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸರಕಾರ ವೈಫಲ್ಯ ಅನುಭವಿಸಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಜಾನುವಾರು ಶಿಬಿರ ಸ್ಥಾಪನೆ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಬರಗಾಲ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರು ಶಿಬಿರಗಳನ್ನು ಸ್ಥಾಪಿಸುವಂತೆ 2019ರ ಮೇ 3ರಂದು ಹೈಕೋರ್ಟ್ ಆದೇಶ ನೀಡಿತ್ತು. ಈಗ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನುಷ್ಠಾನದಲ್ಲಿ ಸರಕಾರ ವಿಫಲವಾಗಿದೆ ಎಂದು ನ್ಯಾಯಪೀಠವು ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ಆ ಆದೇಶದ ಬಳಿಕ ರಾಜ್ಯದಲ್ಲಿ ಎಷ್ಟು ಜಾನುವಾರು ಶಿಬಿರಗಳನ್ನು ಸ್ಥಾಪಿಸಲಾಗಿದೆ. ಈಗ ಅದರಲ್ಲಿ ಎಷ್ಟು ಜಾನುವಾರಗಳು ಸೌಲಭ್ಯ ಪಡೆದುಕೊಂಡಿವೆ. ಜಾನುವಾರುಗಳಿಗೆ ಪೂರೈಸಿದ ಮೇವು, ಪಶು ಆಹಾರದ ಪ್ರಮಾಣ ಎಷ್ಟು. ಈವರೆಗೆ ಎಷ್ಟು ಜಾನುವಾರು ಶಿಬಿರಗಳನ್ನು ಮುಚ್ಚಲಾಗಿದೆ, ಮತ್ತೆ ಮುಚ್ಚಲು ಕಾರಣಗಳೇನು. ಮುಖ್ಯವಾಗಿ ಜಾನುವಾರು ಶಿಬಿರಗಳನ್ನು ತೆರೆಯಲು ಹಾಗೂ ಮುಚ್ಚಲು ಸರಕಾರದ ಬಳಿ ಇರುವ ನೀತಿ ಏನು. ಈ ಎಲ್ಲ ಅಂಶಗಳ ಬಗ್ಗೆ ನವೆಂಬರ್ 13ರೊಳಗೆ ಸಮಗ್ರ ವರದಿ ನೀಡಿ ಎಂದು ನಿರ್ದೇಶಿಸಿದೆ.
ಅದೇ ರೀತಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅನುಷ್ಠಾನ ಸ್ಥಿತಿಗತಿ ಏನು. ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆ, ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ ರಚನೆ ಇವುಗಳಲ್ಲಿ ಇಲ್ಲಿಯವರೆಗೆ ನಡೆದ ಸಭೆಗಳೆಷ್ಟು. ಸಭಾ ನಡವಳಿಗಳು, ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಗಳೇನು. ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣೆ ಮತ್ತು ವಿಪತ್ತು ಉಪಶಮನ ನಿಧಿಗಳನ್ನು ಸ್ಥಾಪಿಸಿದೆಯೇ. ಅದರಲ್ಲಿ ಮೀಸಲಿಟ್ಟ ಹಣ, ಖರ್ಚಾದ ಮೊತ್ತದ ಬಗ್ಗೆ ಸಮಗ್ರವಾದ ವರದಿ ನೀಡಿ. ಇನ್ನು ವರದಿಯನ್ನು ಸಂಪೂರ್ಣ ದಾಖಲೆಗಳ ಸಮೇತ ನ.27ರೊಳಗೆ ಸಲ್ಲಿಸುವಂತೆ ಆದೇಶಿಸಿ ವಿಚಾರಣೆಯನ್ನು ನ.28ಕ್ಕೆ ಮುಂದೂಡಿಕೆ ಮಾಡಿದೆ