ನನ್ನಿಂದ ಮತ್ತು 6 ಪಕ್ಷೇತರ ಶಾಸಕರಿಂದ ಬಿಜೆಪಿಗೆ ಬೆಂಬಲ: ಗೋಪಾಲ್ ಕಂಡಾ
ಹರ್ಯಾಣದಲ್ಲಿ ಸರಕಾರ ರಚನೆಗೆ ದಿಲ್ಲಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಸರತ್ತು
ಹೊಸದಿಲ್ಲಿ, ಅ.25: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಸರಕಾರ ರಚಿಸುವ ಕಸರತ್ತು ರಾಷ್ಟ್ರ ರಾಜಧಾನಿಗೆ ವರ್ಗಾವಣೆಯಾಗಿದೆ. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ಕಾಂಗ್ರೆಸ್ನ ಸಿಎಂ ಆಕಾಂಕ್ಷಿ ಭೂಪಿಂದರ್ ಸಿಂಗ್ ಹೂಡಾ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪಕ್ಷೇತರರ ಬೆಂಬಲದೊಂದಿಗೆ ಸರಕಾರ ರಚಿಸಲು ತೀವ್ರ ಪ್ರಯತ್ನ ನಡೆಸುತ್ತಿವೆ. ಕೆಲವು ಪಕ್ಷೇತರರು ದಿಲ್ಲಿಗೆ ಈಗಾಗಲೇ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತ್ಯಂತ ಪ್ರಮುಖ ಬೆಳವಣಿಗೆಯಲ್ಲಿ ಹರ್ಯಾಣ ಲೋಕಹಿತ ಪಕ್ಷದ ನಾಯಕ ಗೋಪಾಲ್ ಕಂಡಾ ತಾನು ಹಾಗೂ ಇತರ ಪಕ್ಷೇತರರು ಬಿಜೆಪಿಗೆ ಷರತ್ತುರಹಿತ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ 40 ಕ್ಷೇತ್ರಗಳಲ್ಲಿ ಜಯ ಸಾಧಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತಕ್ಕೆ ಆರು ಸ್ಥಾಗಳ ಕೊರತೆ ಎದುರಿಸುತ್ತಿದೆ. ಕಾಂಗ್ರೆಸ್ 31 ಸ್ಥಾನಗಳನ್ನು ಬಾಚಿಕೊಂಡಿದೆ. ಏಳು ಪಕ್ಷೇತರರು ಹಾಗೂ ಜನನಾಯಕ ಜನತಾ ಪಕ್ಷ 10 ಸ್ಥಾನಗಳನ್ನು ಪಡೆದು ರಾಜ್ಯದಲ್ಲಿ ಮುಖ್ಯ ಪಾತ್ರವಹಿಸುವ ನಿರೀಕ್ಷೆ ಮೂಡಿಸಿದೆ.
ಶುಕ್ರವಾರ ಬೆಳಗ್ಗೆ ದಿಲ್ಲಿಗೆ ತಲುಪಿರುವ ಖಟ್ಟರ್, ಹರ್ಯಾಣ ಭವನದಲ್ಲಿ ಪಕ್ಷೇತರ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಬಿಜೆಪಿ ಉನ್ನತ ನಾಯಕರನ್ನು ಭೇಟಿಯಾಗಿ ಸರಕಾರ ರಚನೆಯ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ವಿರುದ್ಧ ಒಂದಾಗುವಂತೆ ಪಕ್ಷೇತರ ಶಾಸಕರಿಗೆ ಕರೆ ನೀಡಿರುವ ಹೂಡಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕ ಗುಲಾಂ ನಬಿ ಆಝಾದ್ರನ್ನು ದಿಲ್ಲಿಯಲ್ಲಿ ಭೇಟಿಯಾದರು.
‘‘ಹರ್ಯಾಣದಲ್ಲಿ ಜನತೆ ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಬಿಜೆಪಿ ಪಕ್ಷೇತರ ಶಾಸಕರುಗಳ ಬೆಂಬಲ ಪಡೆಯಲು ಅವರ ಮೇಲೆ ಒತ್ತಡ ಹಾಕಲು ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಕೆಲಸ’’ ಎಂದು ಹೂಡಾ ಹೇಳಿದ್ದಾರೆ.
ಬಿಜೆಪಿ ಹರ್ಯಾಣದಲ್ಲಿ ಸರಕಾರ ರಚಿಸಿದರೆ, ಒಟ್ಟು ಅಭಿವೃದ್ಧಿ ಕಾರ್ಯ ಹೆಚ್ಚಾಗಲಿದೆ. ಹೆಚ್ಚಿನ ಪಕ್ಷೇತರ ಶಾಸಕರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪಕ್ಷದ ಹಿನ್ನಡೆಯಿಂದ ಹತಾಶರಾಗಿ ರಾಜೀನಾಮೆ ನೀಡುವುದಕ್ಕೆ ಮುಂದಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷ ಸುಭಾಶ್ ಬರಾಲ ಹೇಳಿದ್ದಾರೆ.