ಉಡುಪಿ ಸಹಿತ ಆರು ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯೋಜನೆ: ಡಾ.ಅಶ್ವಥ್ ನಾರಾಯಣ್
![ಉಡುಪಿ ಸಹಿತ ಆರು ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯೋಜನೆ: ಡಾ.ಅಶ್ವಥ್ ನಾರಾಯಣ್ ಉಡುಪಿ ಸಹಿತ ಆರು ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯೋಜನೆ: ಡಾ.ಅಶ್ವಥ್ ನಾರಾಯಣ್](https://www.varthabharati.in/sites/default/files/images/articles/2019/10/25/216382-1572013563.jpg)
ಉಡುಪಿ, ಅ.25: ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಸರಕಾರಿ ಮೆಡಿಕಲ್ ಕಾಲೇಜು ಇರಬೇಕೆಂಬುದು ಸರಕಾರದ ಉದ್ದೇಶವಾಗಿದೆ. ಅದ ರಂತೆ ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲದ ಉಡುಪಿ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಕಾಲೇಜು ಸ್ಥಾಪಿಸಲು ಯೋಜನೆ ರೂಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು. ರಾಜ್ಯದ ಆರು ಜಿಲ್ಲೆಗಳಲ್ಲಿ ಮಾತ್ರ ಸರಕಾರಿ ಮೆಡಿಕಲ್ ಕಾಲೇಜುಗಳಿಲ್ಲ. ಇದರಲ್ಲಿ ಐದು ಜಿಲ್ಲೆಗಳಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಆದರೆ ಒಂದು ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರಿ ಎರಡೂ ಮೆಡಿಕಲ್ ಕಾಲೇಜಿಲ್ಲ. ಈ ನಿಟ್ಟಿನಲ್ಲಿ ಆರು ಜಿಲ್ಲೆಗಳಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸ ಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗುವುದು ಎಂದರು.
ಅವಿಭಜಿತ ದ.ಕ. ಜಿಲ್ಲೆ ಹೆಚ್ಚಿನ ಮಾನ್ಯತೆ ಹಾಗೂ ಪ್ರಗತಿ ಸಾಧಿಸಲು ಶಿಕ್ಷಣವೇ ಕಾರಣ. ಆರ್ಥಿಕ, ಸಾಮಾಜಿಕವಾಗಿ ಎದುರಿಸುತ್ತಿರುವ ಎಲ್ಲ ಸಮಸ್ಯೆ ಗಳಿಗೆ ಶಿಕ್ಷಣ ಮತ್ತು ತಂತ್ರಜ್ಞಾನದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ಕ್ಷೇತ್ರಗಳಿಗೆ ಉಡುಪಿ ಜಿಲ್ಲೆ ಹೆಚ್ಚಿನ ಒತ್ತು ನೀಡಿರು ವುದರಿಂದ ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟವನ್ನು ಇನ್ನೂ ಹೆಚ್ಚಿಸಬೇಕು ಎಂದು ಅವರು ಹೇಳಿದರು.
ನೀತಿ ಆಯೋಗವು ಅವಿಷ್ಕಾರದಲ್ಲಿ ಕರ್ನಾಟಕಕ್ಕೆ ನಂಬರ್ ಒಂದು ಸ್ಥಾನ ನೀಡಿದೆ. ಕೈಗಾರಿಕೆಗಳಿಗೆ ಬೇಕಾಗಿರುವ ಗುಣಮಟ್ಟದ ಸಂಪನ್ಮೂಲ ಗಳನ್ನು ಪೂರೈಸುವಲ್ಲಿ ನಾವು ಹಿನ್ನಡೆ ಕಂಡಿದೆ. ಆ ರೀತಿಯ ಗುಣಮಟ್ಟದ ಶಿಕ್ಷಣಗಳನ್ನು ನೀಡಲು ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಆದುದರಿಂದ ಈ ವಿಚಾರ ದಲ್ಲಿ ಸುಧಾರಣೆ ಮಾಡಬೇಕಾಗಿದೆ. ಪ್ರಗತಿಪರ ಪಥದಲ್ಲಿರುವ ಉಡುಪಿ ಜಿಲ್ಲೆ ಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಶಿಕ್ಷಣ ಸಂಸ್ಥೆಗಳಲ್ಲಿ, ತಂತ್ರಜ್ಞಾನ, ಐಟಿ ಬಿಟಿಯಲ್ಲಿ ಸುಧಾರಣೆ ತರಲು ಎಲ್ಲ ರೀತಿಯ ಸಕಾರ ನೀಡಲಾಗುವುದು ಎಂದರು.
ರಾಜಕೀಯ ಪಕ್ಷಗಳಲ್ಲಿರುವ ಗುಣಮಟ್ಟ ಆಧಾರದಲ್ಲಿ ಸರಕಾರ ಗುಣಮಟ್ಟ ಹೆಚ್ಚಲು ಸಾಧ್ಯವಾಗುತ್ತದೆ. ಸರಕಾರ ಬೇರೆ ರಾಜಕೀಯ ಪಕ್ಷ ಬೇರೆ ಆಗಲು ಸಾಧ್ಯ ಇಲ್ಲ. ಆದುದರಿಂದ ಪಕ್ಷದ ಕಾರ್ಯಕರ್ತರ ಚಿಂತನೆ, ಸ್ಪೂರ್ತಿ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ. ಕಾರ್ಯಕರ್ತರ ಶ್ರಮಕ್ಕೆ ಪೂರಕವಾದ ಆಡಳಿತ ವನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಮುಖಂಡ ರಾದ ಉದಯ ಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಪ್ರಾಸ್ತಾವಿಕ ವಾಗಿ ಮಾತ ನಾಡಿದರು. ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದರು. ಕುತ್ಯಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸರಕಾರಿ ವೈದ್ಯಕೀಯ ಕಾಲೇಜಿಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ 25 ಎಕರೆ ಜಾಗ: ಭಟ್
ಉಡುಪಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವು ದಾದರೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿರುವ 25 ಎಕರೆ ಜಾಗವನ್ನು ನೀಡಲು ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಮಣಿಪಾಲದಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನಿಂದ ಸ್ಥಳೀಯರಿಗೆ ಯಾವುದೇ ಲಾಭ ಇಲ್ಲ. ಮುಂದೆ ಸರಕಾರಿ ಕಾಲೇಜು ಸ್ಥಾಪನೆಯಾದರೆ ಸ್ಥಳೀಯ ಯುವಕರಿಗೆ ತುಂಬಾ ಪ್ರಯೋ ಜನ ಆಗಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಉಡುಪಿ ಜಿಲ್ಲೆಗೆ ಅತಿ ಅಗತ್ಯವಾಗಿರುವ ಸರಕಾರಿ ನರ್ಸಿಂಗ್ ಕಾಲೇಜು ಮತ್ತು ಪ್ಯಾರಾ ಮೆಡಿಕಲ್ ಕಾಲೇಜನ್ನು ತಕ್ಷಣವೇ ಮಂಜೂರು ಮಾಡಬೇಕು. ಇಲ್ಲಿ ಸಾಕಷ್ಟು ಖಾಸಗಿ ನರ್ಸಿಂಗ್ ಕಾಲೇಜುಗಳಿದ್ದರೂ ಈಗಾಗಲೇ ಅವು ಭರ್ತಿಯಾಗಿವೆ. ಸರಕಾರಿ ನರ್ಸಿಂಗ್ ಕಾಲೇಜಿನಿಂದ ಸರಕಾರಿ ಆಸ್ಪತ್ರೆಗಳಿಗೂ ಸಾಕಷ್ಟು ಸಹಾಯ ಆಗಲಿದೆ. ಇದಕ್ಕೆ ಬೇಕಾದ ಜಾಗದ ವ್ಯವಸ್ಥೆ ಜಿಲ್ಲಾಸ್ಪತ್ರೆಯಲ್ಲಿ ಇದೆ ಎಂದು ಅವರು ಹೇಳಿದರು.