ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್: ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
"ಇದು ನನ್ನ ಅಂತ್ಯವಲ್ಲ, ಆರಂಭ..."
![ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್: ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್: ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ](/images/placeholder.jpg)
ಬೆಂಗಳೂರು, ಅ. 26: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಡಿ ವಿಚಾರಣೆಗಾಗಿ ಸುಮಾರು 50 ದಿನಗಳ ಕಾಲ ದಿಲ್ಲಿ ತಿಹಾರ್ ಜೈಲಿನಲ್ಲಿದ್ದು, ಬಳಿಕ ಜಾಮೀನು ಪಡೆದು ಬೆಂಗಳೂರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಶನಿವಾರ ಮಧ್ಯಾಹ್ನ ಬೆಂಗಳೂರು ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2:40ರ ಸುಮಾರಿಗೆ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಅವರ ಸ್ವಾಗತಕ್ಕೆ ನೆರೆದಿದ್ದ ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಟರ್ಮಿನಲ್ನಿಂದ ಹೊರ ಬಂದರು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರಿಗೆ ಹೂಗುಚ್ಚ ನೀಡಿ, ಹಾರ ಹಾಕಿದರಲ್ಲದೆ ಡಿಕೆಶಿ ಅವರ ಮೇಲೆ ಹೂವಿನ ಮಳೆ ಸುರಿಸಿ ಸಂಭ್ರಮಿಸಿ, ಶಿಳ್ಳೆ-ಕೇಕೇ ಹಾಕಿ, ಜಯಘೋಷ ಮೊಳಗಿಸಿ, ಭಾಜ ಭಜಂತ್ರಿಗಳೊಂದಿಗೆ ಅದ್ದೂರಿ ಸ್ವಾಗತಿಸಿದರು.
ಪಕ್ಷದ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಸಾದಹಳ್ಳಿ ಗೇಟ್ನಿಂದ ಮುಂದಕ್ಕೆ ವಿಮಾನನಿಲ್ದಾಣದತ್ತ ಬರಬಾರದು ಎಂದು ಪೊಲೀಸರು ಸೂಚನೆಯನ್ನೂ ಲೆಕ್ಕಿಸದೆ, ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ನೆರೆದಿದ್ದರು.
ಎಚ್ಡಿಕೆ ಭೇಟಿ: ಹೊಸದಿಲ್ಲಿಯಿಂದ ನಗರಕ್ಕೆ ಆಗಮಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಭೇಟಿ ಮಾಡಿ ಸ್ವಾಗತಿಸಿದರು. ಈ ವೇಳೆ ಉಭಯ ನಾಯಕರು ಪರಸ್ಪರ ಕೈ ಕುಲುಕಿದರು. ಐದು ನಿಮಿಷಗಳ ಕಾಲ ಸಮಾಲೋಚನೆ ನಡೆಸಿ, ತೆರಳಿದರು.
ಈ ಮಧ್ಯೆ ಬದ್ಧ ರಾಜಕೀಯ ವೈರಿಗಳಾಗಿದ್ದ ಎಚ್ಡಿಕೆ ಮತ್ತು ಡಿಕೆಶಿ ಮೈತ್ರಿ ಸರಕಾರ ಪತನಗೊಂಡ ಬಳಿಕವೂ ಸ್ನೇಹಿತರಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜೈಲಿನಲ್ಲಿದ್ದ ವೇಳೆ ಡಿಕೆಶಿ ಅವರನ್ನು ಎಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದ್ದರು.
ವಾಹನದಲ್ಲಿ ಮೆರವಣಿಗೆ: ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕಾರ್ಯಕರ್ತರು ಮತ್ತು ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಮೆರವಣಿಗೆಯಲ್ಲಿ ನಗರಕ್ಕೆ ಕರೆತರಲಾಯಿತು.
ಇಲ್ಲಿನ ಸಾದಹಳ್ಳಿ ಗೇಟ್ನಲ್ಲಿ ಬೃಹತ್ ಗಾತ್ರದ 600 ಕೆ.ಜಿ. ತೂಕದ 20 ಅಡಿ ಉದ್ದದ ಸೇಬಿನ ಹಾರ ಅವರಿಗೆ ಎರಡು ಕ್ರೈನ್ಗಳ ಮೂಲಕ ಹಾಕಲಾಯಿತು. ವಿವಿಧ ಜಾನಪದ ಕಲಾತಂಡಗಳ ಕಲಾ ಪ್ರದರ್ಶನ, ಕಾರ್ಯಕರ್ತರ ನೃತ್ಯದ ಮೂಲಕ ಡಿಕೆಶಿ ಅವರನ್ನು ನಗರದ ಕೆಪಿಸಿಸಿ ಕಚೇರಿಗೆ ಕರೆತರಲಾಯಿತು.
ಇದು ನನ್ನ ಅಂತ್ಯವಲ್ಲ, ಆರಂಭ: ‘ನಾನು ಯಾರಿಂದಲೂ ಲಂಚ ಪಡೆದಿಲ್ಲ, ಯಾರಿಗೂ ಮೋಸ ಮಾಡಿಲ್ಲ, ಯಾರಿಗೂ ಕೆಟ್ಟದ್ದನ್ನೂ ಬಯಸಿಲ್ಲ. ಆದರೂ, ದುರುದ್ದೇಶದಿಂದ ನನ್ನ ಮೇಲೆ ಆರೋಪ ಹೊರಿಸಲಾಗಿದೆ. ಇದು ನನ್ನ ಅಂತ್ಯವಲ್ಲ, ಆರಂಭ’ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.
‘ಪಕ್ಷದ ನೂರಾರು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಈ ಶಿವಕುಮಾರ್ಗೆ ಆಗಿರುವ ಕಿರುಕುಳ ತಮಗೆ ಆಗಿರುವ ಕಿರುಕುಳವೆಂದು ಭಾವಿಸಿ ನನ್ನ ಪರವಾಗಿ ಪ್ರಾರ್ಥನೆ ಮಾಡಿದ್ದೀರಿ, ನಿಮ್ಮ ಋಣವನ್ನು ತೀರಿಸಲು ಸಾಧ್ಯವಿಲ್ಲ’ ಎಂದು ಶಿವಕುಮಾರ್ ಕೃತಜ್ಞತೆ ಸಲ್ಲಿಸಿದರು.
‘ನನ್ನ 40 ವರ್ಷಗಳ ರಾಜಕಾರಣಕ್ಕೆ ಕೊನೆ ಹಾಡಬೇಕೆಂದು ನನ್ನ ಮೇಲೆ ಆರೋಪ ಹೊರಿಸಲಾಗಿದೆ. ನಾನು, ನನ್ನ ತಾಯಿ, ಪತ್ನಿ-ಪುತ್ರಿ ಸೇರಿ ನನ್ನ ನೂರಕ್ಕೂ ಅಧಿಕ ಸ್ನೇಹಿತರಿಗೆ ನೀಡಿರುವ ಕಿರುಕುಳವನ್ನು ಮರೆಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ’
-ಡಿ.ಕೆ.ಶಿವಕುಮಾರ್ ಮಾಜಿ ಸಚಿವ