ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಶೀಘ್ರ ಬಿಡುಗಡೆಗೆ ಗಣ್ಯರು, ಸಾಹಿತಿಗಳ ಒತ್ತಾಯ
ನಕ್ಸಲ್ ಚಟುವಟಿಕೆ ಆರೋಪದಲ್ಲಿ ಬಂಧನ

ಬೆಂಗಳೂರು, ಅ. 26: ಸ್ವರಾಜ್ ಇಂಡಿಯಾ ರಾಜ್ಯ ಕಾರ್ಯದರ್ಶಿ, ಪತ್ರಕರ್ತ ಹಾಗೂ ಗೌರಿ ಮೀಡಿಯಾ ಟ್ರಸ್ಟ್ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ, ಬಂಧಿಸಲು ಕೊಟ್ಟಿರುವ ಕಾರಣ ಮತ್ತು ರೀತಿಯನ್ನು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಚಂಪಾ, ಬಿ.ಟಿ.ಲಲಿತಾನಾಯಕ್, ದಿನೇಶ್ ಅಮಿನ್ಮಟ್ಟು, ಗೌರಿ ಮೀಡಿಯಾ ಟ್ರಸ್ಟ್ ಅಧ್ಯಕ್ಷ ಪ್ರೊ.ನಗರಗೆರೆ ರಮೇಶ್ ಸೇರಿ ಹಲವು ಗಣ್ಯರು ಖಂಡಿಸಿದ್ದಾರೆ.
ಗೌರಿ ಲಂಕೇಶ್-ನ್ಯಾಯಪಥ ಪತ್ರಿಕೆಯ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ರಾಯಚೂರಿಗೆ ಹೋಗಿದ್ದ ಮೂರ್ತಿ ಅವರನ್ನು ಬಂಧಿಸಿರುವ ರೀತಿ ಖಂಡನಾರ್ಹವಾಗಿದ್ದು, ಈ ಕೂಡಲೇ ಕಾನೂನು ಪ್ರಕ್ರಿಯೆ ಚುರುಕುಗೊಳಿಸಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಗಣ್ಯರು ಆಗ್ರಹಿಸಿದ್ದಾರೆ.
ಜನಪರ ಹೋರಾಟಗಳಲ್ಲಿ ಭಾಗಿಯಾಗುತ್ತಾ, ಚಿಂತನಶೀಲ ಬರಹಗಾರರೂ ಆಗಿರುವ ನರಸಿಂಹಮೂರ್ತಿ ಕರ್ನಾಟಕದ ಪ್ರಮುಖ ಸಾಮಾಜಿಕ ಕಾರ್ಯಕರ್ತರಲ್ಲಿ ಒಬ್ಬರು. ಬಿಎಂಐಸಿ ವಿರೋಧಿ ಹೋರಾಟ ಮತ್ತು ಗೌರಿ ಮೀಡಿಯಾ ಪ್ರಯತ್ನಗಳ ಭಾಗವಾಗಿ ನಮಗೆ ಅವರೊಡನೆ ನೇರ ಒಡನಾಟವೂ ಇದೆ ಎಂದು ತಿಳಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಇವರನ್ನು ವಿವಿಧ ಪ್ರಕರಣಗಳಲ್ಲಿ 25 ವರ್ಷಗಳ ಹಿಂದೆ ಭಾಗಿಯಾಗಿದ್ದ ವಿನೋದ್ ಎಂದು ಗುರುತಿಸಿರುವುದೇ ಆಧಾರವೆಂದು ಹೇಳಿ, ಆ ಕಾರಣಕ್ಕೆ ಬಂಧಿಸಿದ್ದೇವೆಂದು ಹೇಳಲಾಗಿದೆ. ರಾಯಚೂರು ಮತ್ತು ರಾಜ್ಯದ ಹಲವೆಡೆ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುತ್ತಾ, ಜನಾಂದೋಲನಗಳಲ್ಲಿ ಭಾಗಿಯಾಗುತ್ತಾ ಬಂದಿರುವುದಲ್ಲದೇ ಅವರು ಬರೆದಿರುವ ಲೇಖನಗಳು ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ಹೀಗಿರುವಾಗ 25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರು ಎಂಬುದು ಸುಳ್ಳು ಆರೋಪ ಎಂದು ಖಚಿತವಾಗಿದೆ ಎಂದು ಆರೋಪಿಸಲಾಗಿದೆ.
ಸರಕಾರದ ರೀತಿ-ನೀತಿ, ಧೋರಣೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಇರುವುದು, ಆರ್ಥಿಕ ಹಗರಣಗಳ ಬಗ್ಗೆ ಪರಿಣಿತ ಬರಹಗಳನ್ನು ನರಸಿಂಹಮೂರ್ತಿ ಬರೆದಿರುವುದನ್ನು ಸರಕಾರವು ಅಪರಾಧ ಎಂದು ಪರಿಗಣಿಸುತ್ತದೆಯೇ? ಎಂದು ಗಣ್ಯರು ಪ್ರಶ್ನಿಸಿದ್ದಾರೆ.
ಗೌರಿ ಲಂಕೇಶರ ಪರಂಪರೆಯ ಮುಂದುವರಿಕೆಯಾಗಿ ನಡೆಸುತ್ತಿರುವ ಮಾಧ್ಯಮ ಸಂಸ್ಥೆಯನ್ನು ಗುರಿ ಮಾಡುವ ಉದ್ದೇಶದಿಂದ ಸರಕಾರ ಕ್ರಮಕ್ಕೆ ಮುಂದಾಗಿದೆ ಎಂಬ ಅನುಮಾನ ಸೃಷ್ಟಿಸಿದೆ. ಜನಪರ ಪತ್ರಿಕೋದ್ಯಮದ ದನಿಗಳನ್ನು ದಮನಿಸುತ್ತಿರುವ ಹಲವು ಉದಾಹರಣೆಗಳನ್ನು ನೋಡುತ್ತಿದ್ದೇವೆ. ಆದರೆ, ಸಾಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಯಾವುದೇ ಪ್ರಯತ್ನಗಳನ್ನು ನಾವು ವಿರೋಧಿಸುತ್ತೇವೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ವಿವಿಧ ಮಾರ್ಗಗಳನ್ನು ಬಳಸಿದರೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಲಾಗಿದೆ.







