ನಾನು ಹೋರಾಡುತ್ತೇನೆ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಡಿ.ಕೆ.ಶಿವಕುಮಾರ್
"ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ"

ಬೆಂಗಳೂರು, ಅ.26: ನಾನಾಗಲಿ, ನನ್ನ ತಮ್ಮನಾಗಲಿ, ನನ್ನ ಕುಟುಂಬದವರಾಗಲಿ ನಮ್ಮ ವ್ಯವಹಾರಗಳಲ್ಲಿ ಯಾವುದೇ ಬಗೆಯ ತಪ್ಪು ಮಾಡಿದ್ದರೆ, ಯಾರಿಗಾದರೂ ಮೋಸ ಮಾಡಿದ್ದರೆ, ಕಾನೂನು ರೀತಿಯಲ್ಲಿ ಗಲ್ಲು ಶಿಕ್ಷೆ ಸೇರಿದಂತೆ ಯಾವುದೇ ಬಗೆಯ ಶಿಕ್ಷೆಯನ್ನು ಅನುಭವಿಸಲು ಸಿದ್ಧವಾಗಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಹೊಸದಿಲ್ಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್, ಶನಿವಾರ ನಗರದ ಕ್ವೀನ್ಸ್ರಸ್ತೆಯಲ್ಲಿ ಪಕ್ಷದ ಪ್ರಮುಖ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹುಟ್ಟಿನಿಂದ ರೈತ, ಬೆಳೆದಂತೆ ಉದ್ಯಮಿಯಾದೆ. ನನ್ನ ಆಯ್ಕೆಯಿಂದ ಶಿಕ್ಷಣ ಕ್ಷೇತ್ರ ಆಯ್ಕೆ ಮಾಡಿಕೊಂಡೆ, ರಾಜಕಾರಣಿಯಾಗಬೇಕು ಎಂಬುದು ನನ್ನ ಅಭಿರುಚಿಯಾಗಿತ್ತು. 7 ಬಾರಿ ಶಾಸಕನಾಗಿದ್ದೇನೆ, ಸೋಲು, ಗೆಲುವು ಎರಡನ್ನು ಕಂಡಿದ್ದೇನೆ. ಆದರೆ, ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡಿಲ್ಲ ಎಂದು ಅವರು ಹೇಳಿದರು.
ನಾವೇ ಮಾಡಿದ ಕಾನೂನಿಗೆ ಗೌರವ ಕೊಡಬೇಕೆಂದು ಈ.ಡಿ. ಕೊಟ್ಟ ನೋಟಿಸ್ಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾದೆ. ಈ ನಡುವೆ ಚುನಾವಣಾ ಆಯೋಗಕ್ಕೆ ನಾವು ಸಲ್ಲಿಸಿರುವ ಪ್ರಮಾಣ ಪತ್ರಗಳು ಹಾಗೂ ನ್ಯಾಯಾಲಯದಲ್ಲಿ ನಡೆದ ಪ್ರಕ್ರಿಯೆಗಳ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ನನ್ನ ಮಗಳ ಆಸ್ತಿಯ ಬಗ್ಗೆಯೂ ಬಿಜೆಪಿಯ ಸ್ನೇಹಿತರು ಮಾತನಾಡಿದ್ದಾರೆ. ಎಲ್ಲ ಹೇಳಿಕೆಗಳಿಗೂ ಉತ್ತರ ನೀಡುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ನನ್ನ ತಾಯಿಗೆ ನಾನು ಬೇನಾಮಿದಾರನೇ? ತಾಯಿ ತನ್ನ ಮಗನನ್ನು ನಂಬದೆ ಯಾರನ್ನು ನಂಬಬೇಕು. ನ್ಯಾಯದ ಪೀಠದಿಂದ ಅನ್ಯಾಯದ ತೀರ್ಪು ಬರಬಾರದು ಎಂಬುದು ನನ್ನ ವಾದ. ಎರಡು ವರ್ಷಗಳಿಂದ ನಾನು ಅನುಭವಿಸುತ್ತಿರುವ ವೇದನೆಯನ್ನು ಜನತೆಗೆ ತಿಳಿಸದಿದ್ದರೆ ತಪ್ಪಾಗುತ್ತದೆ ಎಂದು ಶಿವಕುಮಾರ್ ಹೇಳಿದರು. ನಾನು ಹೋರಾಡುತ್ತೇನೆ, ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದಿಲ್ಲ, ಸಮಯ ಹಾಗೂ ಕಾನೂನು ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತದೆ. ನನ್ನ ಬಂಧನವಾದ ಕೆಲವೇ ನಿಮಿಷಗಳಲ್ಲಿ ಕೇರಳದಲ್ಲಿ ಪಂಜಿನ ಮೆರವಣಿಗೆ, ಅಸ್ಸಾಂ, ಗುಜರಾತ್, ದಿಲ್ಲಿಯಲ್ಲಿ ಪ್ರತಿಭಟನೆಗಳು ನಡೆದವು. ಬೆಂಗಳೂರಿನಲ್ಲಿ ಸಮಾಜದ ವಿವಿಧ ಸಂಘಟನೆಗಳು ಸೇರಿ ಬೃಹತ್ ಹೋರಾಟ ನಡೆಸಿದವು. ಈ ಜನರ ಋಣವನ್ನು ಹೇಗೆ ತೀರಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ದಿಲ್ಲಿ ಹೈಕೋರ್ಟ್ ನನಗೆ ಕೊಟ್ಟಿರುವ ಜಾಮೀನು ರದ್ದುಕೋರಿ ಗೌರವಾನ್ವಿತ ಈ.ಡಿ.ಯವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಐಟಿ, ಈ.ಡಿ. ಆಯ್ತು ಈಗ ಸಿಬಿಐ ತನಿಖೆಗೆ ಅನುಮತಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಸಿಬಿಐನವರಿಗೂ ಅಗತ್ಯ ಸಹಕಾರ ನೀಡುತ್ತೇನೆ. ಜೈಲಿನಲ್ಲಿ ಎಲ್ಲ ಕಾಯ್ದೆಗಳನ್ನು ಅಧ್ಯಯನ ಮಾಡಿದ್ದೇನೆ ಎಂದು ಅವರು ಹೇಳಿದರು.
ನನ್ನ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಪ್ರಕರಣ ಹಾಕಿದ್ದಾರೆ. ಈ ರೀತಿ ಮಾಡಲು ಅವರಿಗೆ ಯಾರು ಹೇಳಿದ್ದಾರೋ? ನನ್ನ ವಿರುದ್ಧ ಪ್ರಯೋಗಿಸಿರುವ ಈ ಪ್ರಯೋಗ ಬೇರೆಯವರ ಮೇಲೂ ಪ್ರಯೋಗಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.
ನಾನು ಇಂಧನ ಹಾಗೂ ಜಲಸಂಪನ್ಮೂಲ ಸಚಿವನಾಗಿದ್ದ ವೇಳೆ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಮೊಬೈಲ್ ಫೋನ್ ಉಡುಗೊರೆ ನೀಡಿದ್ದೆ. ಕೂಡಲೇ ನನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂತು, ನನ್ನ ವಿರುದ್ಧ ಹೇಳಿಕೆಗಳನ್ನು ನೀಡಿದ ಒಂದಿಬ್ಬರು ಬಿಟ್ಟರೆ ಉಳಿದವರೆಲ್ಲ ಮೊಬೈಲ್ ತೆಗೆದುಕೊಂಡಿದ್ದಾರೆ. 50 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಉಡುಗೊರೆ ಪಡೆದವರಿಗೆ ಯಾಕೆ ಐಟಿ ನೋಟಿಸ್ ಹೋಗಿಲ್ಲ ಎಂದು ಅವರು ಹೇಳಿದರು.
ಸದನದಲ್ಲಿ ಶಾಸಕ ಶ್ರೀನಿವಾಸಗೌಡ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ. ಅವರು ಆರೋಪಿಸಿದವರಿಗೆ ಯಾಕೆ ನೋಟಿಸ್ ಹೋಗಿಲ್ಲ, ನನ್ನ ಮನೆಯಲ್ಲಿ 41 ಲಕ್ಷ ರೂ. ನನ್ನ ತಮ್ಮ ಸುರೇಶ್ ಮನೆಯಲ್ಲಿ 21 ಲಕ್ಷ ರೂ.ಸಿಕ್ಕಿದೆ ನಿಜ. ನಾವು ಬೆಂಗಳೂರು ಜಿಲ್ಲೆಯವರು. ನಮ್ಮ ಕೃಷಿ ಭೂಮಿ ಎಷ್ಟಿದೆ ಗೊತ್ತೆ ಎಂದು ಶಿವಕುಮಾರ್ ಪ್ರಶ್ನಿಸಿದರು.
86 ವರ್ಷದ ನನ್ನ ತಾಯಿ ದಿಲ್ಲಿಗೆ ಹೋಗಿ ಸಮನ್ಸ್ ಪಡೆದು ನೋಟಿಸ್ಗೆ ಉತ್ತರ ನೀಡುವುದು ಎಂದರೆ ಏನು? ಯಾರು ಆ ನೋಟಿಸ್ ಕೊಡಿಸಿದ್ದಾರಲ್ಲ ಅವರ ಕುಟುಂಬ ಸದಸ್ಯರಿಗೆ ಇಂತಹ ಪರಿಸ್ಥಿತಿ ಎದುರಾದರೆ ಅವರಿಂದ ಸಹಿಸಲು ಸಾಧ್ಯವೇ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಜನರ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಕೆಲವರಿಗೆ ಸಹಾಯ ಮಾಡಿರಬಹುದು. ಆದರೆ, ನನ್ನ ಬಂಧನವಾದ ದಿನದಿಂದ ಈವರೆಗೆ ನನಗೆ ಕೊಟ್ಟಿರುವ ಪ್ರೀತಿಯನ್ನು ಹಾಗೂ ಆ ಋಣವನ್ನು ತೀರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.
ಜೈಲಿನಲ್ಲಿದ್ದಾಗ ಸ್ವತಃ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಬಂದು ಭೇಟಿ ಮಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಭೇಟಿಗೆ ಅವಕಾಶ ಸಿಕ್ಕಿಲ್ಲ, ಎಚ್.ಡಿ.ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್ ಭೇಟಿಯಾದರು. ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯರನ್ನು ಭೇಟಿಗೆ ಅವಕಾಶ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಕೆ.ಜೆ.ಜಾರ್ಜ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಡಾ.ಬಿ.ಪುಷ್ಪಾ ಅಮರ್ನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನನ್ನ ಬಂಧನವಾದಾಗ ಹಾಗೂ ಇವತ್ತು ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಬರುವವರೆಗೆ ಸಂಚಾರ ದಟ್ಟಣೆಯಿಂದ ಅನೇಕರಿಗೆ ತೊಂದರೆಯಾಗಿದೆ. ಅವರೆಲ್ಲರಲ್ಲು ನಾನು ವೈಯಕ್ತಿಕವಾಗಿ ಹಾಗೂ ಪಕ್ಷದ ವತಿಯಿಂದ ಕ್ಷಮೆಯಾಚಿಸುತ್ತೇನೆ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ







