ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಪಿಎಫ್ಐ ಆಗ್ರಹ
![ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಪಿಎಫ್ಐ ಆಗ್ರಹ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಿಡುಗಡೆಗೆ ಪಿಎಫ್ಐ ಆಗ್ರಹ](https://www.varthabharati.in/sites/default/files/images/articles/2019/10/27/216644-1572160724.jpg)
ಮಂಗಳೂರು: ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಂಧನವನ್ನು ಖಂಡಿಸಿರುವ ಪಾಪ್ಯುಲರ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ, ಅವರ ಶೀಘ್ರ ಬಿಡುಗಡೆಗೆ ಆಗ್ರಹಿಸಿದ್ದಾರೆ.
ಪೊಲೀಸರೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವ ಪ್ರಕಾರ, "25 ವರ್ಷಗಳ ಹಿಂದೆ ರಾಯಚೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿನೋದ್ ಎಂಬಾತ ಆರೋಪಿಯಾಗಿದ್ದಾನೆ. 25 ವರ್ಷಗಳಿಂದ ತಲೆಮರೆಸಿಕೊಂಡಿರುವ ಆತ ನರಸಿಂಹಮೂರ್ತಿಯ ಹೆಸರಿನಲ್ಲಿ ಸೆರೆಸಿಕ್ಕಿದ್ದಾನೆ."
ಪೊಲೀಸ್ ಪೇದೆಯೊಬ್ಬ ನರಸಿಂಹಮೂರ್ತಿಯವರನ್ನೇ ವಿನೋದ್ ಎಂದು ಗುರುತಿಸಿರುವುದರ ಹೊರತಾಗಿ ಬೇರೆ ಯಾವುದೇ ಸಾಕ್ಷಿ ಪೊಲೀಸರ ಬಳಿ ಇಲ್ಲ ಎಂದು ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಪ್ರಕರಣದ ಆರೋಪಿಗಳೆಲ್ಲರೂ ಈ ಹಿಂದೆಯೇ ಖುಲಾಸೆಗೊಂಡಿದ್ದಾರೆ.
ನರಸಿಂಹಮೂರ್ತಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಪೊಲೀಸರ ಹೇಳಿಕೆ ಇಲ್ಲಿ ಹಾಸ್ಯಾಸ್ಪದವಾಗಿದೆ. ಏಕೆಂದರೆ ನರಸಿಂಹಮೂರ್ತಿ ರಾಜ್ಯದ ಹೆಸರಾಂತ ಪತ್ರಿಕೆಯಾಗಿದ್ದ 'ಗೌರಿ ಲಂಕೇಶ್'ನಲ್ಲಿ ಸಕ್ರಿಯರಾಗಿದ್ದರು. ಅವರ ಬಹಳಷ್ಟು ಲೇಖನ, ವರದಿಗಳು ಕೂಡ ಸ್ವತಃ ಅವರ ಹೆಸರಿನಲ್ಲೇ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಾತ್ರವಲ್ಲದೆ, ಅವರು ಒಬ್ಬ ಸಾಮಾಜಿಕ ಹೋರಾಟಗಾರನಾಗಿ ಜನಸಾಮಾನ್ಯರೆಡೆಯಲ್ಲಿ ಗುರುತಿಸಿಕೊಂಡ ವರು. ಆದರೂ ಇವರು ಪೊಲೀಸರ ಪ್ರಕಾರ 25 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯಾಗಿದ್ದಾರೆ ಎಂದು ಪಿಎಫ್ಐ ತಿಳಿಸಿದೆ.
ಪೊಲೀಸರ ಈ ದ್ವಂದ್ವ ನೀತಿಯು ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಪೊಲೀಸರ ಈ ಪೂರ್ವಾಗ್ರಹಪೀಡಿತ ಕ್ರಮವು, ಜನಪರ ಹೋರಾಟ ಮತ್ತು ಸ್ವತಂತ್ರ ಮಾಧ್ಯಮ ಧ್ವನಿಯನ್ನು ಉಡುಗಿಸುವ ಪ್ರಯತ್ನವಲ್ಲದೇ ಮತ್ತೇನಲ್ಲ. ನರಸಿಂಹಮೂರ್ತಿಯವರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿರುವ ಅಬ್ದುಲ್ ರಝಾಕ್ ಕೆಮ್ಮಾರ, ಅವರ ಪರವಾಗಿ ನಡೆಯುವ ನ್ಯಾಯದ ಹೋರಾಟದಲ್ಲಿ ಕೈಜೋಡಿಸಲಿದೆ ಎಂದು ಹೇಳಿದ್ದಾರೆ.