‘ಕ್ಯಾರ್’ ಚಂಡಮಾರುತದ ಹಿನ್ನೆಲೆ: ಮುಂದಿನ ಎರಡು ದಿನ ಮೀನುಗಾರಿಕೆಗೆ ತೆರಳದಂತೆ ಸೂಚನೆ

ಮಂಗಳೂರು, ಅ.27: ‘ಕ್ಯಾರ್’ ಚಂಡಮಾರುತ ಒಮಾನ್ನತ್ತ ದಿಕ್ಕು ಬದಲಾಯಿಸಿದರೂ ಕೂಡ ಅರಬ್ಬೀ ಸಮುದ್ರದಲ್ಲಿ ತನ್ನ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಮುಂದಿನ ಎರಡು ದಿನಗಳ ಕಾಲ ಸಂಭಾವ್ಯ ಅಪಾಯ ತಪ್ಪಿಸಲು ಮೀನುಗಾರಿಕೆಗೆ ತೆರಳದಂತೆ ಕರಾವಳಿ ಕಾವಲು ಪೊಲೀಸ್ ಪಡೆಯ ಅಧೀಕ್ಷಕ ಆರ್.ಚೇತನ್ ಸೂಚಿಸಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ಮುಂದಿನ 48 ಗಂಟೆಗಳ ಕಾಲ ಸಮುದ್ರ ಪ್ರಕ್ಷುಬ್ಧಗೊಂಡು ಬಲವಾದ ಗಾಳಿ ಬೀಸಲಿದೆ. ದೊಡ್ಡ ಗಾತ್ರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ನೀಡಿದ ಸೂಚನೆಯ ಆಧಾರದ ಮೇಲೆ ಈ ಸೂಚನೆ ನೀಡಲಾಗಿದೆ.
ರವಿವಾರ ಮಳೆಯ ಆರ್ಭಟವಿಲ್ಲದಿದ್ದರೂ ಕೂಡ ‘ಕ್ಯಾರ್’ ಚಂಡಮಾರುತದ ಪರಿಣಾಮಕ್ಕೆ ಪೂರಕ ಎಂಬಂತೆ ಮೋಡ ಕವಿದ ವಾತಾವರಣವಿತ್ತು. ಕಡಲ ತೀರದಲ್ಲಿ ಬಲವಾದ ಬೀಸುತ್ತಿತ್ತು. ಇದರಿಂದ ಕಡಲ ತೀರದ ಬಹುತೇಕ ಜನರು ದೀಪಾವಳಿ ಹಬ್ಬದ ಸಂಭ್ರಮ ಆಚರಿಸಲಾಗದೆ ಭಯ-ಆತಂಕದಲ್ಲೇ ಕಾಲ ಕಳೆಯುವಂತಾಯಿತು.
Next Story





