ಆದಿತ್ಯ ಠಾಕ್ರೆ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಬೇಕು: ಕೇಂದ್ರ ಸಚಿವ ಅಠಾವಳೆ
ಹೊಸದಿಲ್ಲಿ, ಅ.28: ಮಹಾರಾಷ್ಟ್ರದಲ್ಲಿ ಶಿವಸೇನೆಯ ಆದಿತ್ಯ ಠಾಕ್ರೆ ಉಪಮುಖ್ಯಮಂತ್ರಿ ಹುದ್ದೆ ಆಫರ್ ಸ್ವೀಕರಿಸಬೇಕೆಂದು ಕೇಂದ್ರ ಸಚಿವ ಹಾಗೂ ರಿವೊಲ್ಯೂಶನರಿ ಪಾರ್ಟಿ ಆಫ್ ಇಂಡಿಯಾ ನಾಯಕ ರಾಮದಾಸ್ ಅಠಾವಳೆ ಹೇಳಿದ್ದಾರೆ.
ರೊಟೇಶನ್ ಆಧಾರದಲ್ಲಿ ಸಿಎಂ ಹುದ್ದೆಯನ್ನು ಶಿವಸೇನೆಗೆ ನೀಡಬೇಕೆಂಬ ಪ್ರಸ್ತಾಪವನ್ನು ಬಿಜೆಪಿ ಒಪ್ಪುವ ಸಾಧ್ಯತೆ ಕಡಿಮೆ ಎಂದೂ ಅವರು ಹೇಳಿಕೊಂಡಿದ್ದಾರೆ. "ಉಪಮುಖ್ಯಮಂತ್ರಿ ಹುದ್ದೆಯನ್ನಾದರೆ ಶಿವಸೇನೆಗೆ ಐದು ವರ್ಷಗಳ ಕಾಲ ನೀಡಬಹುದು. ಶಿವಸೇನೆ ಇದನ್ನು ಒಪ್ಪಬೇಕು ಹಾಗೂ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಬೇಕು" ಎಂದು ಅವರು ಹೇಳಿದ್ದಾರೆ.
"ಜನರು ಬಿಜೆಪಿ ಹಾಗೂ ಶಿವಸೇನೆಯ ಆಡಳಿತ ಬಯಸಿದ್ದಾರೆ. ಎನ್ ಡಿಎಗೆ ನಿರೀಕ್ಷಿತ ಸ್ಥಾನಗಳು ದೊರಕಿಲ್ಲವಾದರೂ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಬಹುಮತವಿದೆ, ಬಿಜೆಪಿ ಮಾತ್ರ ಸಿಎಂ ಹುದ್ದೆ ಮೇಲೆ ಹಕ್ಕು ಸ್ಥಾಪಿಸಬಹುದು, ಶಿವಸೇನೆಗೆ ಕೇಂದ್ರದಲ್ಲಿ ಸಚಿವ ಹುದ್ದೆಯನ್ನೂ ನೀಡಬಹುದು, ಎರಡೂ ಪಕ್ಷಗಳ ಜತೆ ಮಾತನಾಡಿ ಸಮಸ್ಯೆ ಪರಿಹರಿಸಲು ಯತ್ನಿಸುತ್ತೇನೆ,'' ಎಂದು ಅಠಾವಳೆ ಹೇಳಿದ್ದಾರೆ.
ಸರಕಾರ ರಚನೆ ನಿರ್ಧಾರ ಮುಂದಿನ ನಾಲ್ಕೈದು ದಿನಗಳಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದೂ ಅವರು ತಿಳಿಸಿದರು.