ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಲೋಕಾಯುಕ್ತರು ಶಿಫಾರಸು ಮಾಡಬಹುದು, ಆದೇಶವಲ್ಲ: ಹೈಕೋರ್ಟ್
![ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಲೋಕಾಯುಕ್ತರು ಶಿಫಾರಸು ಮಾಡಬಹುದು, ಆದೇಶವಲ್ಲ: ಹೈಕೋರ್ಟ್ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಲೋಕಾಯುಕ್ತರು ಶಿಫಾರಸು ಮಾಡಬಹುದು, ಆದೇಶವಲ್ಲ: ಹೈಕೋರ್ಟ್](https://www.varthabharati.in/sites/default/files/images/articles/2019/10/28/216715-1572270398.jpeg)
ಬೆಂಗಳೂರು, ಅ.28: ಭ್ರಷ್ಟಾಚಾರ ಎಸಗಿ ಸಿಕ್ಕಿ ಬೀಳುವ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರು ಸರಕಾರಕ್ಕೆ ಕೇವಲ ಶಿಫಾರಸು ಮಾಡಬಹುದೇ ಹೊರತು ಆದೇಶ ಮಾಡುವಂತಿಲ್ಲ. ಆ ಶಿಫಾರಸು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಸ್ವಾತಂತ್ರ ಶಿಸ್ತು ಪ್ರಾಧಿಕಾರ(ಸರಕಾರ) ಹೊಂದಿದೆ.
ಈ ರೀತಿಯ ತೀರ್ಪೊಂದನ್ನು ಹೈಕೋರ್ಟ್ ನೀಡಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ಮಾಡುವುದು ಶಿಫಾರಸು ಮಾತ್ರ, ಅದು ಆದೇಶವಲ್ಲ ಎಂದು ತಿಳಿಸಿದೆ.
ಈ ಮೂಲಕ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸರಕಾರಕ್ಕೆ ಮಾಡುವ ಶಿಫಾರಸು ಮೇರೆಗೆ ಅಂತಿಮ ನಿರ್ಧಾರ ಕೈಗೊಳ್ಳುವ ವಿವೇಚನೆ ಸರಕಾರದ್ದು ಎಂದು ಸ್ಪಷ್ಟಪಡಿಸಿದೆ.
ರೈತರಿಗೆ ಸೇರಬೇಕಿದ್ದ ಹಣದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮೂಲದ ಕರ್ನಾಟಕ ವಸತಿ ಮಂಡಳಿ(ಕೆಎಚ್ಬಿ)ಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸಿ.ಕೃಷ್ಣಮೂರ್ತಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಉಪ ಲೋಕಾಯುಕ್ತರು ಸರಕಾರಕ್ಕೆ ಶಿಫಾರಸು ಪ್ರಕರಣದಲ್ಲಿ ಹೈಕೋರ್ಟ್ ಹೀಗೆ ಹೇಳಿದೆ.
ಕರ್ನಾಟಕ ನಾಗರಿಕ ಸೇವೆಗಳ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ಅಧಿನಿಯಮಗಳು-1957ರ ನಿಯಮ 14-ಎ(2)(ಡಿ) ಪ್ರಕಾರ ಉಪ ಲೋಕಾಯುಕ್ತರು ಕೃಷ್ಣಮೂರ್ತಿ ಅವರನ್ನು ಸೇವೆಯಿಂದ ವಜಾಗೊಳಿಸಲು ಸರಕಾರಕ್ಕೆ ಶಿಫಾರಸು ಮಾಡಿದ್ದರು. ಪ್ರಕರಣವೊಂದರ ತನಿಖೆಯನ್ನು ತನಿಖಾಧಿಕಾರಿ ಪೂರ್ಣಗೊಳಿಸಿದ ನಂತರ ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರು, ತನಿಖಾ ಅಂಶಗಳೊಂದಿಗೆ ಸರಕಾರಕ್ಕೆ ತಮ್ಮ ಶಿಫಾರಸು ಸಲ್ಲಿಸಬೇಕೆಂದು ನಿಯಮ ಹೇಳುತ್ತದೆ. ಅದರಂತೆ ಉಪ ಲೋಕಾಯುಕ್ತರು ತಮ್ಮ ಶಿಫಾರಸು ಸರಕಾರ(ಶಿಸ್ತು ಪ್ರಾಧಿಕಾರ)ಕ್ಕೆ ಕಳುಹಿಸಿದ್ದಾರೆ.
ಆದರೆ, ಶಿಸ್ತು ಪ್ರಾಧಿಕಾರವು ಶಿಫಾರಸು ಹಾಗೂ ತನಿಖಾಧಿಕಾರಿಯ ತನಿಖೆ ಹಾಗೂ ತನಿಖಾ ಅಂಶಗಳನ್ನು ಒಪ್ಪುವ ಅಥವಾ ಒಪ್ಪದೇ ಇರಬಹುದು. ಹೀಗಾಗಿ, ಈ ಪ್ರಕರಣದಲ್ಲಿ ಉಪ ಲೋಕಾಯುಕ್ತರ ಶಿಫಾರಸು ಅಂತಿಮ ಆದೇಶ ಎಂದು ಭೀತಿ ವ್ಯಕ್ತಪಡಿಸಿರುವುದು ಸರಿಯಲ್ಲ. ಉಪ ಲೋಕಾಯುಕ್ತರ ಶಿಫಾರಸು ಪರಿಗಣಿಸಿ ಅಂತಿಮ ಆದೇಶ ಹೊರಡಿಸುವುದು ಶಿಸ್ತು ಪ್ರಾಧಿಕಾರಕ್ಕೆ ಬಿಟ್ಟ ವಿಷಯ ಎಂದು ಆದೇಶದಲ್ಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.