ಇಬ್ಬರು ಪಕ್ಷೇತರ ಶಾಸಕರಿಂದ ಬಿಜೆಪಿಗೆ ಬೆಂಬಲ ಘೋಷಣೆ
ಮಹಾರಾಷ್ಟ್ರ ಸರಕಾರ ರಚನೆ
ಮುಂಬೈ,ಅ.28: ಅಮರಾವತಿ ಜಿಲ್ಲೆಯ ಬಡ್ನೇರಾದ ಶಾಸಕ ರವಿ ರಾಣಾ ಸೇರಿದಂತೆ ಇಬ್ಬರು ಪಕ್ಷೇತರ ಶಾಸಕರು ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಶಿವಸೇನೆಯೊಂದಿಗೆ ಹಗ್ಗಜಗ್ಗಾಟದಲ್ಲಿ ತೊಡಗಿರುವ ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ.
ರಾಣಾ ವಿದರ್ಭ ಪ್ರದೇಶದ ಬಡ್ನೇರಾ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟ ಅವರನ್ನು ಬೆಂಬಲಿಸಿತ್ತು.
ಅವರ ಪತ್ನಿ ನವನೀತ ರಾಣಾ ಅವರು ಅಮರಾವತಿಯ ಸಂಸದೆಯಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ಸಿಪಿ ಬೆಂಬಲದೊಡನೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಶಿವಸೇನೆಯ ನಾಯಕ ಆನಂದರಾವ್ ಅಡ್ಸಲ್ ಅವರನ್ನು ಸೋಲಿಸಿದ್ದರು.
“ಹೌದು,ನಾನು ಬಿಜೆಪಿಗೆ ಬೆಂಬಲವನ್ನು ಘೋಷಿಸಿದ್ದೇನೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿದರ್ಭದವರಾಗಿದ್ದು,ನಾನೂ ಅದೇ ಪ್ರದೇಶಕ್ಕೆ ಸೇರಿದ್ದೇನೆ. ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ನನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜನ್ನೂ ಮಂಜೂರು ಮಾಡಿದ್ದಾರೆ” ಎಂದು ರಾಣಾ ಸುದ್ದಿಗಾರರಿಗೆ ತಿಳಿಸಿದರು.