ಮಾದಕ ವ್ಯಸನದ ವಿರುದ್ಧ ವಿಶೇಷ ಕಾರ್ಯಾಚರಣೆ: ಒಂದೇ ವಾರದಲ್ಲಿ 34 ಪ್ರಕರಣ ದಾಖಲು; ಇಬ್ಬರ ಬಂಧನ
![ಮಾದಕ ವ್ಯಸನದ ವಿರುದ್ಧ ವಿಶೇಷ ಕಾರ್ಯಾಚರಣೆ: ಒಂದೇ ವಾರದಲ್ಲಿ 34 ಪ್ರಕರಣ ದಾಖಲು; ಇಬ್ಬರ ಬಂಧನ ಮಾದಕ ವ್ಯಸನದ ವಿರುದ್ಧ ವಿಶೇಷ ಕಾರ್ಯಾಚರಣೆ: ಒಂದೇ ವಾರದಲ್ಲಿ 34 ಪ್ರಕರಣ ದಾಖಲು; ಇಬ್ಬರ ಬಂಧನ](https://www.varthabharati.in/sites/default/files/images/articles/2019/10/28/216763-1572281259.jpg)
ಉಡುಪಿ, ಅ.28: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸರು ಮಣಿಪಾಲ, ಉಡುಪಿ ನಗರ ಸಹಿತ ಜಿಲ್ಲೆಯ ಇತರ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದು, ಗಾಂಜಾ ಸೇವನೆಗೆ ಸಂಬಂಧಿಸಿ ಒಂದು ವಾರದಲ್ಲಿ 34 ಪ್ರಕರಣಗಳನ್ನು ದಾಖಲಿಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಗಾಂಜಾ ಸೇವನೆಗೆ ಸಂಬಂಧಿಸಿದಂತೆ 34 ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, 34 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿಮಣಿಪಾಲ ಠಾಣಾ ಪೊಲೀಸರು 10 ಪ್ರಕರಣಗಳನ್ನು, ಉಡುಪಿ ಸೆನ್ ಅಪರಾಧ ಠಾಣಾ ಪೊಲೀಸರು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 18 ಪ್ರಕರಣಗಳನ್ನು ಹಾಗೂ ಪಡುಬಿದ್ರಿ ಪೊಲೀಸರು ಎರಡು, ಶಿರ್ವ ಪೊಲೀಸರು 4 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ಪೈಕಿ ಮಣಿಪಾಲ ಪೊಲೀಸರು ದಾಖಲಿಸಿದ 10 ಪ್ರಕರಣಗಳಲ್ಲಿ 5 ಪ್ರಕರಣ ಹಾಗೂ ಸೆನ್ ಅಪರಾಧ ಠಾಣಾ ಪೊಲೀಸರು ದಾಖಲಿಸಿದ 18 ಪ್ರಕರಣಗಳ ಪೈಕಿ 17 ಪ್ರಕರಣಗಳಲ್ಲಿ ಅಂದರೆ ಒಟ್ಟು 34 ಪ್ರಕರಣಗಳಲ್ಲಿ 22 ಪ್ರಕರಣಗಳಲ್ಲಿ ವಿದ್ಯಾರ್ಥಿಗೇ ಭಾಗಿಯಾಗಿರುವುದು ಕಂಡುಬಂದಿದೆ.
ಗಾಂಜಾ ಮಾರಾಟಗಾರರ ಸೆರೆ
ನಗರದ ಮೂಡನಿಡಂಬೂರು ಗ್ರಾಮದ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169ಎ ಪಕ್ಕದಲ್ಲಿರುವ ಶಂಕರನಾರಾಯಣ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಹೈದರಬಾದ್ ಮೂಲದ ಮಣಿಪಾಲ ಸರಳಬೆಟ್ಟು ನಿವಾಸಿ ತಿಪಿರ್ ನೇನಿ ಆದಿತ್ಯ(21) ಹಾಗೂ ತೆಲಂಗಾಣ ಮೂಲದ ಮಣಿಪಾಲ ಈಶ್ವರ ನಗರ ನಿವಾಸಿ ಮೊಗಿಲಿ ಹೇಮಂತ್ ರೆಡ್ಡಿ(20) ಎಂಬವರನ್ನು ಉಡುಪಿ ಸೆನ್ ಪೊಲೀಸರು ಅ.27ರಂದು ಬಂಧಿಸಿದ್ದಾರೆ.
ಇವರಿಂದ ಸುಮಾರು 1,20,000ರೂ. ಮೌಲ್ಯದ 4 ಕಿಲೋ 034 ಗ್ರಾಂ ತೂಕದ ಗಾಂಜಾ ಮತ್ತು 20,000ರೂ. ಮೌಲ್ಯದ ಎರಡು ಮೊಬೈಲ್ ಹ್ಯಾಂಡ್ಸೆಟ್, ಗಾಂಜಾ ಮಾರಾಟ ಮಾಡಲು ಪ್ರಯಾಣಕ್ಕೆ ಬಳಸಿರುವ 7,00,000 ರೂ. ಮೌಲ್ಯದ ಇನೋವಾ ಕಾರು ಮತ್ತು 30,000ರೂ. ಮೌಲ್ಯದ ಮಣಿಪಾಲದ ಬಾಡಿಗೆ ಸ್ಕೂಟರ್ನ್ನು ವಶಪಡಿಸಿಕೊಳ್ಳಲಾಗಿದೆ. ಇವು ಗಳ ಒಟ್ಟು ವೌಲ್ಯ 8,70,000ರೂ. ಎಂದು ಅಂದಾಜಿಸಲಾಗಿದೆ.
ಉಡುಪಿ ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಪಿ. ಸೂಚನೆಯಂತೆ ಸೆನ್ ಎಸ್ಸೈ ಲಕ್ಷ್ಮಣ, ಎಎಸ್ಸೈಐ ಕೇಶವ ಗೌಡ ಹಾಗೂ ಸಿಬ್ಬಂದಿಯವರಾದ ಕೃಷ್ಣಪ್ರಸಾದ್, ನಾಗೇಶ್, ರಾಘವೇಂದ್ರ, ಅರುಣ್ ಕುಮಾರ್, ಸಂಜಯ್, ಜೀವನ್ ಈ ಕಾರ್ಯಾ ಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ಮುಂದುವರಿಕೆ: ಎಸ್ಪಿ
ಯುವ ಜನಾಂಗವು ಈ ರೀತಿ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಶೋಚನೀಯವಾಗಿದ್ದು, ಪಾಲಕರು/ಪೋಷಕರು ತಮ್ಮ ಮಕ್ಕಳ ಚಲನ ವಲನದ ಬಗ್ಗೆ ನಿಗಾ ಇಡಬೇಕು. ಸಾರ್ವಜನಿಕರು ಈ ಬಗ್ಗೆ ಸ್ವಯಂ ಪ್ರೇರಿತರಾಗಿ ಪೊಲೀಸರಿಗೆ ಗುಪ್ತವಾಗಿ ಮಾಹಿತಿ ನೀಡಿ, ಸ್ವಸ್ಥ ಸಮಾಜವನ್ನು ಕಟ್ಟಲು ಸಹಕರಿಸ ಬೇಕು. ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ ಹಲವಾರು ಕಾರ್ಯ ಕ್ರಮಗಳನ್ನು ಹಾಗೂ ಕಾರ್ಯಾಗಾರಗಳನ್ನು ಶಾಲಾ/ಕಾಲೇಜುಗಳಲ್ಲಿ ಈಗಾ ಗಲೇ ಪೊಲೀಸ್ ಇಲಾಖೆ ಕೈಗೊಂಡಿದ್ದು ಮುಂದೆ ಕೂಡ ನಡೆಸಿಕೊಂಡು ಹೋಗಲಿದೆ. ಮಾದಕ ವ್ಯಸನದ ವಿರುದ್ಧ ಕಾರ್ಯಾಚರಣೆ ಮುಂದುವರಿ ಯಲಿದೆ ಎಂದು ಎಸ್ಪಿ ನಿಶಾ ಜೇಮ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.