ಕಾಶ್ಮೀರ ಭೇಟಿಗೆ ಯುರೋಪ್ ಸಂಸದೀಯ ನಿಯೋಗಕ್ಕೆ ಅವಕಾಶ ಸಂಸತ್ತಿಗೆ ಅವಮಾನ: ಜೈರಾಮ್ ರಮೇಶ್
ಹೊಸದಿಲ್ಲಿ, ಅ.28: ಜಮ್ಮು ಮತ್ತು ಕಾಶ್ಮೀರಕ್ಕೆ ಯುರೋಪಿಯನ್ ಸಂಸದೀಯ ನಿಯೋಗ ಭೇಟಿ ನೀಡುತ್ತಿರುವುದು ಭಾರತದ ಸಂಸತ್ತಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ತೀವ್ರ ಅವಮಾನಕರ ವಿಷಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಜೊತೆಗೆ, ಕಾಶ್ಮೀರದಲ್ಲಿ 370 ವಿಧಿ ರದ್ದಾದ ಬಳಿಕ ಆ ದೇಶಕ್ಕೆ ಭಾರತದ ರಾಜಕೀಯ ಮುಖಂಡರು ಭೇಟಿ ನೀಡುವುದನ್ನು ತಡೆಯುವುದು ಯಾಕೆ ಎಂದೂ ಅವರು ಪ್ರಶ್ನಿಸಿದ್ದಾರೆ. ಭಾರತದ ರಾಜಕೀಯ ಮುಖಂಡರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಜನರನ್ನು ಭೇಟಿಯಾಗುವುದನ್ನು ತಡೆಯಲಾಗುತ್ತದೆ. ಆದರೆ ಯುರೋಪಿಯನ್ ಸಂಸದೀಯ ನಿಯೋಗಕ್ಕೆ ಜಮ್ಮು ಮತ್ತು ಕಾಶ್ಮೀರ ಭೇಟಿಗೆ ಅವಕಾಶ ಮಾಡಿಕೊಡಲು ನಮ್ಮ ಅಸಾಮಾನ್ಯ ಎದೆ ಹೊಂದಿರುವ ರಾಷ್ಟ್ರೀಯತೆಯ ಚಾಂಪಿಯನ್ಗೆ ಯಾವ ಪ್ರೇರಣೆಯಾಗಿರಬಹುದು ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ಸಂಸತ್ತಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಇದೊಂದು ಭಾರೀ ಅವಮಾನವಾಗಿದೆ ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಇದೇ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಕಾಶ್ಮೀರಕ್ಕೆ ಭೇಟಿ ನೀಡಲು ಭಾರತದ ರಾಜಕಾರಣಿಗಳಿಗೆ ಪದೇ ಪದೇ ಅವಕಾಶ ನಿರಾಕರಿಸಲಾಗುತ್ತಿದೆ. “ನನ್ನ ಹೇಬಿಯಸ್ ಕಾರ್ಪರ್ಸ್ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನನಗೆ ಶ್ರೀನಗರಕ್ಕೆ ಪ್ರವೇಶಿಸಲು ಅನುಮತಿ ನೀಡಿದೆ. ಈಗಲೂ ಭಾರತದ ಸಂಸದರಿಗೆ ಜಮ್ಮು ಕಾಶ್ಮೀರಕ್ಕೆ ಪ್ರವೇಶಾವಕಾಶವಿಲ್ಲ. ಆದರೆ ಯುರೋಪಿಯನ್ ಸಂಸದೀಯ ನಿಯೋಗವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ” ಎಂದು ಹೇಳಿದ್ದಾರೆ.