ಕುಡಂಕುಳಂ ಪರಮಾಣು ಸ್ಥಾವರಕ್ಕೆ ಸೈಬರ್ ದಾಳಿಯ ಎಚ್ಚರಿಕೆ: ವಿವರಣೆ ನೀಡಲು ಸರಕಾರಕ್ಕೆ ಶಶಿ ತರೂರ್ ಆಗ್ರಹ
ಹೊಸದಿಲ್ಲಿ, ಅ.29: ತಮಿಳುನಾಡಿನ ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರವು ಸೈಬರ್ ದಾಳಿಗೊಳಗಾಗಿರಬಹುದು ಎಂದು ಟ್ವಿಟರ್ ಬಳಕೆದಾರನೋರ್ವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಿವರಣೆಯನ್ನು ನೀಡುವಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಂಗಳವಾರ ಸರಕಾರವನ್ನು ಆಗ್ರಹಿಸಿದ್ದಾರೆ. ಟ್ವಿಟರ್ ಹೇಳಿಕೆಯನ್ನು ಅತ್ಯಂತ ಗಂಭೀರ ಎಂದು ಬಣ್ಣಿಸಿರುವ ಅವರು,ನಮ್ಮ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಸಲು ವೈರಿ ಶಕ್ತಿಗೆ ಸಾಧ್ಯವಾದರೆ ಭಾರತದ ರಾಷ್ಟ್ರೀಯ ಭದ್ರತೆಯ ಮೇಲೆ ಅದರ ಪರಿಣಾಮಗಳು ಊಹಾತೀತವಾಗಿವೆ ಎಂದು ಹೇಳಿದ್ದಾರೆ.
ಆದರೆ ಕುಡಂಕುಳಂ ಸ್ಥಾವರದ ಅಧಿಕಾರಿಗಳು ಟ್ವಿಟರ್ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ವಿದ್ಯುತ್ ಸ್ಥಾವರದ ನೆಟ್ವರ್ಕ್ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ ಮತ್ತು ವಿಶ್ವದ ಎಲ್ಲಿಂದಲೂ ಯಾವುದೇ ಬಾಹ್ಯ ನೆಟ್ವರ್ಕ್ನ ಮೂಲಕ ಅದನ್ನು ಪ್ರವೇಶಿಸಲು ಸಾಧ್ಯವಿಲ್ಲ. ಸ್ಥಾವರದ ಎರಡೂ ಘಟಕಗಳು ವಿದ್ಯುತ್ತನ್ನು ಉತ್ಪಾದಿಸುತ್ತಿವೆ ಎಂದು ಕುಡಂಕುಳಂ ಸೈಟ್ ಡೈರೆಕ್ಟರ್ ಸಂಜಯ ಕುಮಾರ ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಅ.19ರಂದು ತಲಾ 1,000 ಮೆ.ವ್ಯಾ.ಸಾಮರ್ಥ್ಯದ ಎರಡು ಪರಮಾಣು ವಿದ್ಯುತ್ ಘಟಕಗಳ ಪೈಕಿ ಒಂದು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.
ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಸೈಬರ್ ದಾಳಿಯನ್ನು ಪ್ರಸ್ತಾಪಿಸಿ ಕೆಲವು ಸುಳ್ಳುಗಳನ್ನು ಸಾಮಾಜಿಕ ಜಾಲತಾಣಗಳು,ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಹರಡಲಾಗುತ್ತಿದೆ. ಕುಡಂಕುಳಂ ಮತ್ತು ಇತರ ಭಾರತೀಯ ಪರಮಾಣು ವಿದ್ಯುತ್ ಸ್ಥಾವರಗಳ ನಿಯಂತ್ರಣ ವ್ಯವಸ್ಥೆಗಳು ಯಾವುದೇ ಬಾಹ್ಯ ನೆರವಿಲ್ಲದೆ ಸ್ವಯಂ ಆಗಿ ಕಾರ್ಯಾಚರಿಸುತ್ತಿವೆ ಮತ್ತು ಯಾವುದೇ ಹೊರಗಿನ ಸೈಬರ್ ನೆಟ್ವರ್ಕ್ ಮತ್ತು ಇಂಟರ್ನೆಟ್ನೊಂದಿಗೆ ಸಂಪರ್ಕ ಹೊಂದಿಲ್ಲ. ಈ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿಯನ್ನು ನಡೆಸುವುದು ಅಸಾಧ್ಯ ಎಂದು ಸ್ಥಾವರದ ತರಬೇತಿ ಅಧೀಕ್ಷಕ ಹಾಗು ಮಾಹಿತಿ ಅಧಿಕಾರಿ ಆರ್.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
ಭಾರತದ ಸೈಬರ್ ಕ್ಷೇತ್ರದ ಮೇಲೆ ದಾಳಿ ನಡೆದಿರುವ ಕುರುಹುಗಳು ಗೋಚರಿಸಿವೆ ಎಂದು ಸೆ.7ರಂದು ಟ್ವೀಟಿಸಿದ್ದ ಸೈಬರ್ ಬೇಹುಗಾರಿಕೆ ತಜ್ಞ ಪುಕರಾಜ ಸಿಂಗ್ ಅವರು ಸೋಮವಾರ ಮತ್ತೆ ಟ್ವೀಟ್ನ್ನು ಶೇರ್ ಮಾಡಿಕೊಂಡು,‘ಇದೀಗ ಬಹಿರಂಗಗೊಂಡಿದೆ. ಕುಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಸೈಬರ್ ದಾಳಿಗೊಳಗಾಗಿದೆ. ಸರಕಾರಕ್ಕೆ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಸ್ಥಾವರದ ಪ್ರಮುಖ ಗುರಿಗಳನ್ನು ದಾಳಿಯು ಭೇದಿಸಿದೆ ’ಎಂದು ಹೇಳಿದ್ದರು.
‘ಮೂರನೇ ವ್ಯಕ್ತಿ’ ಈ ಸೈಬರ್ ದಾಳಿಯನ್ನು ಪತ್ತೆ ಹಚ್ಚಿ ತನಗೆ ಮಾಹಿತಿ ನೀಡಿದ್ದು,ಸೆ.3ರಂದು ತಾನು ಇದನ್ನು ರಾಷ್ಟ್ರೀಯ ಸೈಬರ್ ಭದ್ರತೆ ಸಂಯೋಜಕರ ಗಮನಕ್ಕೆ ತಂದಿದ್ದೆ ಎಂದಿರುವ ಸಿಂಗ್,ಇನ್ನೊಂದು ಗುರಿಯ ಮೇಲೂ ಸೈಬರ್ ದಾಳಿ ನಡೆದಿದೆ ಮತ್ತು ಕೆಲವು ರೀತಿಗಳಲ್ಲಿ ಅದು ಕುಡಂಕುಳಂ ಸ್ಥಾವರಕ್ಕಿಂತಲೂ ಹೆಚ್ಚು ಆತಂಕಾರಿಯಾಗಿದೆ ಎಂದಿದ್ದಾರೆ.