ಅ. 31ಕ್ಕೆ ಕೊಂಕಣ ರೈಲು ಸಂಚಾರದಲ್ಲಿ ವ್ಯತ್ಯಯ
ಉಡುಪಿ, ಅ.29:ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್ ಹಾಗೂ ಜೋಕಟ್ಟೆ ನಡುವೆ ಅ.31ರ ಗುರುವಾರದಂದು ರೈಲ್ವೆ ಹಳಿಯ ದುರಸ್ತಿ ಕಾರ್ಯ ವನ್ನು ನಡೆಸಲಿದ್ದು, ಇದರಿಂದಾಗಿ ಕೊಂಕಣ ರೈಲು ಮಾರ್ಗದಲ್ಲಿ ಅಂದು ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಮಡಂಗಾವ್-ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.70105 ಡೆಮು ಪ್ಯಾಸೆಂಜರ್ ರೈಲನ್ನು ಅ.31ರಂದು ತೋಕೂರಿನಲ್ಲೇ ತಡೆ ಹಿಡಿಯಲಾಗುವುದು. ಬಳಿಕ ಅದೇ ರೈಲು 70106 ನಂ.ನೊಂದಿಗೆ ಅಲ್ಲಿಂದಲೇ ಮರಳಿ ಮಡಂಗಾವ್ಗೆ ತೆರಳಲಿದೆ. ಹೀಗಾಗಿ ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವಿನ ಅದರ ಸಂಚಾರವನ್ನು ರದ್ದುಪಡಿಸಲಾಗಿದೆ.
ಅ.30ರಂದು ಹೊರಡುವ ರೈಲು ನಂ.12133 ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ರೈಲನ್ನು ಸುರತ್ಕಲ್ ನಿಲ್ದಾಣದಿಂದ ಓಡಿಸಲಾಗುವುದು. ಅದು ರೈಲು ನಂ.12134 ಆಗಿ ಅ.31ರಂದು ಸುರತ್ಕಲ್ಗೆ ಆಗಮಿಸಿ ಅಲ್ಲಿಂದಲೇ ಮರು ಪ್ರಯಾಣ ಆರಂಭಿಸುವುದು. ಹೀಗಾಗಿ ಸುರತ್ಕಲ್ ಮತ್ತು ಮಂಗಳೂರು ಜಂಕ್ಷನ್ ನಡುವಿನ ಅದರ ಸಂಚಾರವನ್ನು ರದ್ದುಪಡಿಸಲಾಗಿದೆ.
ಬಿಕಾನೇರ್-ಕೊಚ್ಚುವೇಲಿ ನಡುವೆ ಸಂಚರಿಸುವ ರೈಲು ನಂ.16311ರ ಸಂಚಾರವನ್ನು ಕೊಂಕಣ ರೈಲು ಮಾರ್ಗದಲ್ಲಿ ಸುಮಾರು 250 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ವಿಭಾಗದ ಡಿಜಿಎಂ ಬಾಬನ್ ಘಾಟ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.