ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಪಟಾಕಿ ತ್ಯಾಜ್ಯ ಸೃಷ್ಟಿ
ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದ ವಿಲೇವಾರಿ
![ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಪಟಾಕಿ ತ್ಯಾಜ್ಯ ಸೃಷ್ಟಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಪಟಾಕಿ ತ್ಯಾಜ್ಯ ಸೃಷ್ಟಿ](/images/placeholder.jpg)
ಬೆಂಗಳೂರು, ಅ.29: ಮೂರು ದಿನಗಳ ದೀಪಾವಳಿ ಆಚರಣೆಯಿಂದಾಗಿ ನಗರದಲ್ಲಿ ಭಾರೀ ಪ್ರಮಾಣದ ಪಟಾಕಿ ತ್ಯಾಜ್ಯ ಸೃಷ್ಟಿಯಾಗಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ಅದಕ್ಕೆ ಬೆಂಕಿ ಹಚ್ಚುತ್ತಿರುವುದು ಕಂಡು ಬರುತ್ತಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಮೂರು ದಿನಗಳಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸಿದ್ದು ಇದರಿಂದಾಗಿ ಭಾರಿ ಪ್ರಮಾಣದ ಒಣ ತ್ಯಾಜ್ಯ ಸೃಷ್ಟಿಯಾಗಿದೆ. ಬಿಬಿಎಂಪಿಯಿಂದ ರಸ್ತೆಗಳ ಸ್ವಚ್ಛತಾ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ನಗರದ ಹಲವೆಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವ ದೃಶ್ಯಗಳು ಕಂಡು ಬಂದರೆ, ಹಲವೆಡೆ ರಸ್ತೆಗಳಲ್ಲಿಯೇ ತ್ಯಾಜ್ಯ ಹರಡಿಕೊಂಡಿದೆ.
ಇದರ ನಡುವೆ, ದಸರಾ ಹಬ್ಬದಂದು ವಾಹನಗಳಿಗೆ ಪೂಜೆ ಸಲ್ಲಿಸದವರು ದೀಪಾವಳಿ ಹಬ್ಬದ ದಿನ ಪೂಜೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರೈತರು ಮಾರಾಟಕ್ಕಾಗಿ ತೆಗೆದುಕೊಂಡು ಬರಲಾಗಿದ್ದ ಬಾಳೆಕಂದು, ಮಾವಿನ ಎಲೆ ಹಾಗೂ ಬೂದು ಕುಂಬಳ ಕಾಯಿಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಿದ್ದಾರೆ. ಪರಿಣಾಮ ನಿಗದಿಗಿಂತಲೂ ಹೆಚ್ಚಿನ ಪ್ರಮಾಣ ತ್ಯಾಜ್ಯ ಸೃಷ್ಟಿಯಾಗಿದ್ದು, ವಿಲೇವಾರಿ ಪಾಲಿಕೆಗೆ ತಲೆನೋವಾಗಿ ಪರಿಣಮಿಸಲಿದೆ.
ಸಾಮಾನ್ಯ ದಿನಗಳಲ್ಲಿ ನಗರದಲ್ಲಿ ನಾಲ್ಕೂವರೆ ಸಾವಿರ ಟನ್ ತ್ಯಾಜ್ಯ ಸೃಷ್ಟಿಯಾಗುತ್ತದೆ. ಆದರೆ, ನಗರದಲ್ಲಿ ಕಳೆದೆರಡು ದಿನಗಳಿಂದ ಪೂರ್ಣ ಪ್ರಮಾಣದ ತ್ಯಾಜ್ಯ ವಿಲೇವಾರಿ ಕಾರ್ಯ ನಡೆದಿಲ್ಲ. ಇದರೊಂದಿಗೆ ಪಟಾಕಿ ತ್ಯಾಜ್ಯ ಶೀಘ್ರ ವಿಲೇವಾರಿ ಮಾಡದಿದ್ದರೆ ಗಾಳಿಗೆ ಬೇರೆಡೆಗೆ ಹಾರುವ ಸಾಧ್ಯತೆಯಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾತ್ರ ಪಟಾಕಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ನಿರ್ವಹಣೆಗೆ ಸೂಚನೆ: ಪಟಾಕಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಈಗಾಗಲೇ ಸಿಬ್ಬಂದಿಗೆ ಸೂಚಿಸಲಾಗಿದೆ. ಜತೆಗೆ ಪಟಾಕಿ ತ್ಯಾಜ್ಯಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ದೀಪಾವಳಿ ಸಂಭ್ರಮ ಸಿಲಿಕಾನ್ ಸಿಟಿಯ ಜನತೆಯಲ್ಲಿ ಹರ್ಷ ತಂದಿದ್ದರೆ, ಪೌರ ಕಾರ್ಮಿಕರಿಗೆ ಹೆಚ್ಚಿನ ಹೊರೆ ಹೊರಿಸಿದೆ. ಮನೆ ಮನೆಯಿಂದ ಸಂಗ್ರಹವಾಗುವ ಕಸದೊಂದಿಗೆ ಪಟಾಕಿ ರಾಶಿ ಪೌರ ಕಾರ್ಮಿಕರಿಗೆ ಫಜೀತಿ ತಂದಿದೆ. ಕೇವಲ ಮೂರು ದಿನಗಳಲ್ಲಿ ಪ್ರತಿ ಮನೆಯಿಂದ ಸಂಗ್ರಹವಾಗುವ ಕಸದ ರಾಶಿ ಪ್ರಮಾಣ, ಎರಡು ಪಟ್ಟು ಹೆಚ್ಚಾಗಿದೆ.
ಎಲ್ಲೆಲ್ಲೂ ಪಟಾಕಿ ರಾಶಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಹಾಗೂ ಹಲವು ಸಂಘ-ಸಂಸ್ಥೆಗಳು ಬೆಳಕಿನ ಹಬ್ಬ ದೀಪಾವಳಿ ಹಬ್ಬದಂದು ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸುವಂತೆ ಮನವಿ ಮಾಡಿದ್ದರು. ಆದರೆ, ಇದ್ಯಾವುದರ ಬಗೆಯೂ ಚಿಂತಿಸದ ಬೆಂಗಳೂರು ಜನತೆ ತಮ್ಮ ಮನೆ ಮುಂದಿನ ರಸ್ತೆಗಳಲ್ಲಿ ಪಟಾಕಿಯನ್ನು ಸಿಡಿಸುವುದರ ಮೂಲಕ ಕಸದ ರಾಶಿಯನ್ನೇ ಸೃಷ್ಟಿಸಿದ್ದಾರೆ.
ಕಸದ ರಾಶಿಗೆ ಜನರೇ ಕಾರಣ: ನಗರದಲ್ಲಿ ನಿರಂತರ ಮಳೆಯಿಂದಾದ ಅನಾಹುತಗಳಿಗೆ ಪಾಲಿಕೆ ಹಾಗೂ ಸರಕಾರವನ್ನು ದೂಷಣೆ ಮಾಡಲಾಗುತ್ತಿದೆ. ಆದರೆ, ಕಳೆದ ಎರಡು-ಮೂರು ದಿನಗಳಿಂದ ಪಟಾಕಿ ಸಿಡಿತದಿಂದಾಗಿರುವ ಕಸದ ರಾಶಿಗೆ ಬೆಂಗಳೂರು ಜನತೆಯೇ ಕಾರಣ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಪೌರ ಕಾರ್ಮಿಕರ ಪಾಡು ಹೇಳತೀರದು: ನಗರದಾದ್ಯಂತ ರವಿವಾರ ಹಾಗೂ ಸೋಮವಾರ ಜನತೆ ಹೊಸ ಉಡುಗೆ ತೊಟ್ಟು, ಪಟಾಕಿ ಸಿಡಿಸಿ, ಸಿಹಿ ತಿಂಡಿಗಳನ್ನು ಸವಿದು ಹಬ್ಬದ ಸಂಭ್ರಮದಲ್ಲಿ ಮೈ ಮರೆತಿದ್ದರು. ಆದರೆ, ಇವರು ಮಾಡಿರುವ ಕಸವನ್ನು ಶುಚಿ ಮಾಡುವಲ್ಲಿ ತಮ್ಮ ಇಡೀ ದಿನವನ್ನು ವ್ಯಯಿಸುತ್ತಿರುವ ಪೌರ ಕಾರ್ಮಿಕರ ಪಾಡನ್ನು ಕೇಳುವವರೇ ಇಲ್ಲವಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಪಟಾಕಿಯ ಸದ ರಾಶಿಯನ್ನು ತೆಗೆಯುತ್ತಿದ್ದಾರೆ.