ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಖಂಡನೀಯ: ಕೊಡಗು ಜಿಲ್ಲಾ ಭೀಮ್ ಆರ್ಮಿ
![ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಖಂಡನೀಯ: ಕೊಡಗು ಜಿಲ್ಲಾ ಭೀಮ್ ಆರ್ಮಿ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಖಂಡನೀಯ: ಕೊಡಗು ಜಿಲ್ಲಾ ಭೀಮ್ ಆರ್ಮಿ](https://www.varthabharati.in/sites/default/files/images/articles/2019/10/30/216987-1572374115.jpg)
ಹೆಚ್.ಎಂ.ಕಾವೇರಿ
ಮಡಿಕೇರಿ, ಅ.29: ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ, ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಸುಳ್ಳು ಮೊಕದ್ದಮೆ ಹೂಡಿ ಬಂಧಿಸಲಾಗಿದೆ ಎಂದು ಆರೋಪಿಸಿರುವ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷೆ ಹಾಗೂ ಜಿ.ಪಂ ಮಾಜಿ ಸದಸ್ಯೆ ಹೆಚ್.ಎಂ.ಕಾವೇರಿ, ತಕ್ಷಣ ಬಂಧ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ನರಸಿಂಹಮೂರ್ತಿ ಅವರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ತಕ್ಷಣ ಹಿಂಪಡೆಯಬೇಕು, ಬಂಧನದಿಂದ ಮುಕ್ತಗೊಳಿಸಬೇಕು, ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿಯಂತ್ರಿಸಬೇಕು, ದುರ್ಬಲರ ಪರ ಹೋರಾಟ ನಡೆಸುವವರ ವಿರುದ್ಧ ಷಡ್ಯಂತ್ರ ರೂಪಿಸುವವರನ್ನು ಶಿಕ್ಷಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ದಲಿತರ ಪರ ಹೋರಾಟ ನಡೆಸುವವರನ್ನು ಹತ್ತಿಕ್ಕುವ ಕ್ರಮವನ್ನು ಖಂಡಿಸುವುದಾಗಿ ತಿಳಿಸಿರುವ ಕಾವೇರಿ, ಸಮಾಜದಲ್ಲಿ ಕಂಡುಬರುವ ಲೋಪಗಳ ವಿರುದ್ಧ ಧ್ವನಿ ಎತ್ತುವ ಚಿಂತಕರು, ಪತ್ರಕರ್ತರು ಹಾಗೂ ಹೋರಾಟಗಾರರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರು ಹಾಗೂ ಹೋರಾಟಗಾರರ ವಾಕ್ ಸ್ವಾತಂತ್ರ್ಯವನ್ನು ಸರ್ಕಾರ ಕಸಿದುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ದಲಿತರು ಹಾಗೂ ದುರ್ಬಲ ವರ್ಗದವರ ಪರ ಹೋರಾಟ ನಡೆಸುವವರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು ಸರ್ವಾಧಿಕಾರಿ ಧೋರಣೆ ತೋರುವ ದುರಾಡಳಿತದ ವಿರುದ್ಧ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಬಹುಜನ ಕಾರ್ಮಿಕರ ಸಂಘ, ಕರ್ನಾಟಕ ರೈತ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭೀಮ್ ಆರ್ಮಿ ಸಂಘಟನೆ ಹೋರಾಟವನ್ನು ರೂಪಿಸಲಿದೆ ಎಂದು ಕಾವೇರಿ ಎಚ್ಚರಿಕೆ ನೀಡಿದ್ದಾರೆ.