ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡು ಲಂಡನ್ನಲ್ಲಿ ಹೊಸ ಸರಕಾರ ರಚಿಸಿದ ಮಣಿಪುರದ ಪ್ರತ್ಯೇಕತಾವಾದಿಗಳು
ಲಂಡನ್: ಭಾರತದಿಂದ ಸ್ವಾತಂತ್ರ್ಯವನ್ನು ಏಕಪಕ್ಷೀಯವಾಗಿ ಘೋಷಿಸಿಕೊಂಡಿರುವ ಮಣಿಪುರದ ಪ್ರತ್ಯೇಕತಾವಾದಿ ರಾಜಕೀಯ ನಾಯಕರು ತಾವು ದೇಶದ ಹೊರಗಿದ್ದುಕೊಂಡೇ ಬ್ರಿಟನ್ ನಲ್ಲಿ ಸರಕಾರ ರಚಿಸುವುದಾಗಿ ಹೇಳಿಕೊಂಡಿದ್ದಾರೆ.
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತ ಎರಡು ವರ್ಷಗಳ ನಂತರ ಈ ರಾಜ್ಯ ಭಾರತದ ಭಾಗವಾಗಿದ್ದರೂ ಅಲ್ಲಿ ಹಿಂಸಾತ್ಮಕ ಪ್ರತ್ಯೇಕತಾವಾದಿ ಅಭಿಯಾನಗಳು ನಡೆಯುತ್ತಲೇ ಇವೆ.
ಸ್ವಘೋಷಿತ ಮಣಿಪುರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವ ನರೆಂಗ್ಬೆಮ್ ಸಮರ್ಜಿತ್ ಲಂಡನ್ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ವಿಶ್ವ ಸಂಸ್ಥೆ ತಮ್ಮ ಈ ಪ್ರತ್ಯೇಕ ಸರಕಾರಕ್ಕೆ ಮಾನ್ಯತೆ ನೀಡುವ ಸಲುವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
“ನಮ್ಮ ಈ ಸರಕಾರವನ್ನು ಇಂದಿನಿಂದ ಇಲ್ಲಿಂದ ನಡೆಸುತ್ತೇವೆ,'' ಎಂದು ಹೇಳಿದ ಅವರು ಮಣಿಪುರದಲ್ಲಿ 2012ರಲ್ಲಿ ಮೊದಲು ಮಾಡಲಾದ ಸ್ವಾತಂತ್ರ್ಯ ಘೋಷಣೆಯನ್ನು ಓದಿ ಹೇಳಿದರು. “ನಾವು ವಿಶ್ವ ಸಂಸ್ಥೆಯ ಸದಸ್ಯರಾಗಲು ಪ್ರಯತ್ನಿಸುತ್ತೇವೆ. ಹಲವು ದೇಶಗಳು ನಮ್ಮ ಸ್ವಾತಂತ್ರ್ಯವನ್ನು ಮಾನ್ಯ ಮಾಡುತ್ತವೆ ಎಂದು ನಂಬುತ್ತೇವೆ,'' ಎಂದು ಅವರು ಹೇಳಿದರು.
“ಅಲ್ಲಿ (ಭಾರತದಲ್ಲಿ) ನಾವು ಸ್ವತಂತ್ರರಲ್ಲ ಹಾಗೂ ನಮ್ಮ ಇತಿಹಾಸವನ್ನು ನಾಶಪಡಿಸಲಾಗುತ್ತಿದೆ, ನಮ್ಮ ಸಂಸ್ಕೃತಿ ಕೂಡ ವಿನಾಶದತ್ತ ಸಾಗಿದೆ, ವಿಶ್ವ ಸಂಸ್ಥೆ ನಮ್ಮ ಮಾತುಗಳನ್ನು ಆಲಿಸಬೇಕು, ಮಣಿಪುರದಲ್ಲಿ ವಾಸಿಸುವವರೂ ಮನುಷ್ಯರು ಎಂಬುದು ನಾವು ಇಡೀ ಜಗತ್ತಿಗೆ ಹೇಳುತ್ತೇವೆ,'' ಎಂದು ಅವರು ಹೇಳಿಕೊಂಡರು.
ಲಂಡನ್ ನಲ್ಲಿನ ಭಾರತೀಯ ಹೈಕಮಿಷನ್ ಈ ಬೆಳವಣಿಗೆಗೆ ಪ್ರತಿಕ್ರಿಯಿಸಿಲ್ಲ.