ಭಾರತದ ವಿಪಕ್ಷ ನಾಯಕರಿಗೂ ಕಾಶ್ಮೀರ ಭೇಟಿಗೆ ಅನುಮತಿಸಬೇಕು: ಯುರೋಪಿಯನ್ ನಿಯೋಗದ ಸದಸ್ಯ
ಹೊಸದಿಲ್ಲಿ, ಅ.30: "ವಿದೇಶಿ ನಾಯಕರಿಗೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿರುವ ಭಾರತ ಸರಕಾರ ತನ್ನದೇ ದೇಶದ ವಿಪಕ್ಷ ನಾಯಕರಿಗೂ ಕಾಶ್ಮೀರ ಭೇಟಿಗೆ ಅನುಮತಿಸಬೇಕು. ಈಗ ಒಂದು ವಿಧದ ಅಸಮತೋಲನವಿದೆ, ಸರಕಾರ ಅದನ್ನು ಸರಿ ಪಡಿಸಬೇಕು'' ಎಂದು ಮಂಗಳವಾರ ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪಿಯನ್ ಸಂಸದರ ತಂಡದ ಭಾಗವಾಗಿರುವ ಆಲ್ಟರ್ನೇಟಿವ್ ಫಾರ್ ಜರ್ಮನಿ ಪಕ್ಷದ ನಿಕೋಲಸ್ ಫೆಸ್ಟ್ ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಯೋಗದ ನಾಯಕರು ತಾವು ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದಿದ್ದಾರೆ.
"ಉಗ್ರವಾದ ಒಂದು ಜಾಗತಿಕ ಸಮಸ್ಯೆ, ಉಗ್ರವಾದದ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸುತ್ತೇವೆ'' ಎಂದೂ ನಿಯೋಗದ ಸದಸ್ಯರು ಹೇಳಿದ್ದಾರೆ. "ನಮಗೆ ಭಾರತದ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ಜನಸಾಮಾನ್ಯರನ್ನು ಭೇಟಿಯಾಗುವುದಷ್ಟೇ ನಮ್ಮ ಉದ್ದೇಶ. ಈಗ ಕಾಶ್ಮೀರದಲ್ಲಿ ಸರಿಯಾದ ದಿಕ್ಕಿನಲ್ಲಿ ಕೆಲಸ ನಡೆಯುತ್ತಿದೆ. ಅಲ್ಲಿನ ಜನರು ಶಾಂತಿ ಮತ್ತು ಅಭಿವೃದ್ಧಿ ಬಯಸಿದ್ದಾರೆ'' ಎಂದೂ ನಿಯೋಗದ ಸದಸ್ಯರು ತಿಳಿಸಿದರು.
ಆದರೆ ಭಾರತದ ರಾಜಕೀಯ ನಾಯಕರಿಗೆ ಕಾಶ್ಮೀರ ಭೇಟಿಗೆ ಅವಕಾಶ ನಿರಾಕರಿಸಿರುವ ಕೇಂದ್ರದ ಮೋದಿ ಸರಕಾರ ವಿದೇಶಿ ಸಂಸದರಿಗೆ ಅಲ್ಲಿಗೆ ಭೇಟಿಗೆ ಅನುಮತಿಸಿರುವುದು ಈಗಾಗಲೇ ವಿಪಕ್ಷಗಳಿಂದ ಭಾರೀ ಟೀಕೆಗೊಳಗಾಗಿದೆ.