ಬಚ್ಚನ್ ಕುಟುಂಬದ ದೀಪಾವಳಿ ಪಾರ್ಟಿಯಲ್ಲಿ ಬೆಂಕಿ ಅವಘಡದಿಂದ ಮಹಿಳೆಯನ್ನು ರಕ್ಷಿಸಿದ ಶಾರುಖ್ ಖಾನ್
ಮುಂಬೈ, ಅ.30: ಅಮಿತಾಭ್ ಬಚ್ಚನ್ ಕುಟುಂಬ ದೀಪಾವಳಿ ಸಂದರ್ಭ ಆಯೋಜಿಸಿದ್ದ ಅದ್ದೂರಿಯ ಪಾರ್ಟಿ ವೇಳೆ ನಡೆದ ಆಕಸ್ಮಿಕ ಘಟನೆಯಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಅರ್ಚನಾ ಸದಾನಂದ್ ಅವರ ಲೆಹಂಗಾಗೆ ಬೆಂಕಿ ತಗುಲಿದ್ದು ಕೂಡಲೇ ಧಾವಿಸಿ ಬಂದ ನಟ ಶಾರೂಕ್ ಖಾನ್ ಅವರನ್ನು ರಕ್ಷಿಸಿದ್ದಾರೆ.
ಬೆಂಕಿ ಹತ್ತಿದ್ದನ್ನು ನೋಡಿ ಸ್ಥಳದಲ್ಲಿದ್ದವರು ಗಲಿಬಿಲಿಗೊಳ್ಳುತ್ತಿದ್ದಂತೆಯೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಶಾರುಖ್ ಖಾನ್ ಹಿಂದೆ ಮುಂದೆ ಯೋಚಿಸಿದೆ ಆಕೆಯ ರಕ್ಷಣೆಗೆ ಧಾವಿಸಿ ತಾವು ಧರಿಸಿದ್ದ ಜಾಕೆಟ್ ತೆಗೆದು ಬೆಂಕಿ ನಂದಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಅರ್ಚನಾರ ಬಲಗಾಲು ಹಾಗೂ ಕೈಗಳಿಗೆ ಸುಟ್ಟ ಗಾಯಗಳುಂಟಾಗಿದ್ದರೆ ಶಾರುಖ್ಗೆ ಕೂಡ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆ ಮುಂಜಾನೆ ಸುಮಾರು 3 ಗಂಟೆಗೆ ನಡೆದಿದ್ದು ಆಗ ಕೆಲವು ಅತಿಥಿಗಳು ಇನ್ನೂ ಬಚ್ಚನ್ ನಿವಾಸ `ಜಲ್ಸಾ'ದಲ್ಲಿದ್ದರು. ಶಾರುಖ್ ಪ್ರಸಂಗಾವಧಾನತೆಯಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಘಟನೆ ನಂತರ ಅರ್ಚನಾರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ.