ಪೃಥ್ವಿ ಪೂಜಾರಿ ಆತ್ಮಹತ್ಯೆ ಪ್ರಕರಣ: ತೀರ್ಪು ಮತ್ತೆ ಮುಂದೂಡಿಕೆ
ಉಡುಪಿ, ಅ.30: ಸುಮಾರು ಎಂಟು ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಕ್ರೀಡಾಪಟು ಪೃಥ್ವಿ ಪೂಜಾರಿ ಅಂಪಾರು(17) ಆತ್ಮಹತ್ಯೆ ಪ್ರಕರಣದ ಅಂತಿಮ ತೀರ್ಪನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನ.16ಕ್ಕೆ ಮತ್ತೆ ಮುಂದೂಡಿ ಆದೇಶ ನೀಡಿದೆ.
ಈ ಪ್ರಕರಣದ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶ ಸಿ.ಎಂ.ಜೋಷಿ ತೀರ್ಪನ್ನು ಅ.10ರಂದು ಪ್ರಕಟಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ತೀರ್ಪನ್ನು ಪ್ರಕಟಿಸದೆ ಅ.30ಕ್ಕೆ ಮುಂದೂಡಿ ಆದೇಶ ನೀಡಿದರು. ಇದೀಗ ಇಂದು ಕೂಡ ತೀರ್ಪು ಪ್ರಕಟಿಸದೆ ನ.16ಕ್ಕೆ ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೋಲ್ವಾಲ್ಟ್ನಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಅಂಪಾರಿನ ಶೇಖರ್ ಪೂಜಾರಿಯ ಪುತ್ರಿ ಬ್ರಹ್ಮಾವರ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪೃಥ್ವಿ 2011ರ ಸೆ.27ರಂದು ವಾರಂಬಳ್ಳಿಯ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಆಕೆ ಬರೆದಿದ್ದ ಮರಣ ಪತ್ರದಲ್ಲಿ ಬ್ರಹ್ಮಾವರದ ಮಿಸ್ಬಾನ್ ಎಂಬಾತ ನನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಅದರಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮಿಸ್ಬಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.