ಇನ್ನೆರಡು ದಿನ ಕರಾವಳಿಯಲ್ಲಿ ‘ಮಹಾ’ ಚಂಡಮಾರುತದ ಭೀತಿ!
![ಇನ್ನೆರಡು ದಿನ ಕರಾವಳಿಯಲ್ಲಿ ‘ಮಹಾ’ ಚಂಡಮಾರುತದ ಭೀತಿ! ಇನ್ನೆರಡು ದಿನ ಕರಾವಳಿಯಲ್ಲಿ ‘ಮಹಾ’ ಚಂಡಮಾರುತದ ಭೀತಿ!](/images/placeholder.jpg)
ಮಂಗಳೂರು, ಅ.31:ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ಮಹಾ’ ಚಂಡಮಾರುತ ಇನ್ನೂ ಎರಡು ದಿನ (ನ.1,ನ.2)ರವರೆಗೆ ತನ್ನ ಆರ್ಭಟ ತೋರಿಸುವ ಸಾಧ್ಯತೆ ಇದ್ದು, ಕರಾವಳಿ ತೀರದ ಜನತೆಗೆ ಮತ್ತೆ ಭೀತಿ ಶುರುವಾಗಿದೆ.
‘ಮಹಾ’ ಎಂದು ಗುರುತಿಸಲಾದ ಈ ಚಂಡಮಾರುತವು ಉತ್ತರ-ವಾಯವ್ಯದತ್ತ ಮುನ್ನಡೆದು, ಆಗ್ನೇಯ ಅರಬ್ಬಿ ಸಮುದ್ರ ಪ್ರವೇಶಿಸಿ ಲಕ್ಷದ್ವೀಪ ಬಳಿ ವಾಯಭಾರ ಕುಸಿತವಾಗಿ ಪರಿವರ್ತನೆಗೊಂಡಿದೆ. ಅದರ ನೇರ ಪರಿಣಾಮ ಇದೀಗ ಪಶ್ಚಿಮ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಮೇಲೆ ಆಗಿದೆ. ಹಾಗಾಗಿ ಗುರುವಾರ ಮುಂಜಾನೆಯಿಂದ ಮೋಡ ಮುಸುಕಿದ ವಾತಾವರಣವಿದ್ದು, ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗಿದೆ.
ಕಳೆದೊಂದು ವಾರದಿಂದ ಕರಾವಳಿ ತೀರದಲ್ಲಿ ಗಾಳಿ-ಮಳೆಯೊಂದಿಗೆ ಅಬ್ಬರಿಸಿದ್ದ ‘ಕ್ಯಾರ್’ ಚಂಡಮಾರುತವು ಒಮನ್ನತ್ತ ದಿಕ್ಕು ಹಾಯಿಸಿದೆ. ಇದೀಗ ‘ಮಹಾ’ ಕೂಡಾ ಅದೇ ಹಾದಿಯಲ್ಲಿ ಸಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
►ನಾಲ್ಕನೇ ಚಂಡಮಾರುತ: ಅಂದಹಾಗೆ ಈ ಬಾರಿಯ ಮಳೆಗಾಲದಲ್ಲಿ ಕಾಣಿಸಿಕೊಂಡ ನಾಲ್ಕನೇ ಚಂಡಮಾರುತ ಇದಾಗಿದೆ. ಮೊದಲು ಅರಬಿ ಸಮುದ್ರದಲ್ಲಿ ‘ವಾಯು’ ಚಂಡಮಾರುತ ಕಾಣಿಸಿಕೊಂಡರೆ ಬಳಿಕ ‘ಹಿಕ್ಕಾ’ ಕಾಣಿಸಿಕೊಂಡು ಗುಜರಾತ್ ಭಾಗದಲ್ಲಿ ಭಾರಿ ಮಳೆಯಾಗಿ, ಕೊನೆಗೆ ಒಮನ್ ತೀರ ಪ್ರವೇಶಿಸಿತ್ತು. ‘ಕ್ಯಾರ್’ ಮೂರನೇ ಚಂಡಮಾರುತವಾಗಿದೆ. ಇದೀಗ ‘ಮಹಾ’ ಅಪ್ಪಳಿಸಿದೆ. ಸಾಮಾನ್ಯವಾಗಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವು ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹ.
ಭಾರಿ ಮಳೆ-ಕಡಲು ಪ್ರಕ್ಷುಬ್ಧ: ‘ಮಹಾ’ ಚಂಡಮಾರುತದಿಂದ ಜಿಲ್ಲಾದ್ಯಂತ ಗುರುವಾರ ಭಾರೀ ಮಳೆಯಾಗಿದೆ. ಅರಬಿ ಸಮುದ್ರವು ಗುರುವಾರವೂ ಪ್ರಕ್ಷುಬ್ಧಗೊಂಡಿದೆ. ಸಮುದ್ರದಿಂದ ತೀರಕ್ಕೆ ಭಾರಿ ಅಲೆಗಳು ಅಪ್ಪಳಿಸುತ್ತಿದ್ದು, ಮೀನುಗಾರರು ಕಡಲ ತೀರಕ್ಕೆ ಇಳಿಯದಂತೆ ಮತ್ತು ಕಡಲ ತೀರದ ಜನರು ಎಚ್ಚರದಿಂದ ಇರುವಂತೆ ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ರಸ್ತೆ ಬ್ಲಾಕ್: ಒಂದೇ ಒಂದು ಮಳೆಗೆ ಗುಂಡಿಯಿಂದ ಆವೃತಗೊಂಡಿರುವ ಪ್ರಮುಖ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಅದರ ಪರಿಣಾಮ ಸಂಚಾರ ದಟ್ಟಣೆಯ ಮೇಲಾಗುತ್ತಿವೆ. ಗುರುವಾರವೂ ನಗರದ ಹಲವು ಕಡೆ ರಸ್ತೆ ಬ್ಲಾಕ್ ಆಗಿದೆ. ಇದರಿಂದ ವಾಹನ ಸವಾರರು ಸಕಾಲಕ್ಕೆ ಮನೆ, ಅಂಗಡಿ ಮುಂಗಟ್ಟು, ಕಚೇರಿ ಮತ್ತಿತರ ಕಡೆಗೆ ತೆರಳಲು ಹರಸಾಹಸ ಪಡಬೇಕಾಯಿತು.