ಮಲೆನಾಡಿನಲ್ಲಿ ತಗ್ಗಿದ ಮಳೆಯ ಆರ್ಭಟ
![ಮಲೆನಾಡಿನಲ್ಲಿ ತಗ್ಗಿದ ಮಳೆಯ ಆರ್ಭಟ ಮಲೆನಾಡಿನಲ್ಲಿ ತಗ್ಗಿದ ಮಳೆಯ ಆರ್ಭಟ](https://www.varthabharati.in/sites/default/files/images/articles/2019/10/31/217261-1572541522.jpg)
ಶಿವಮೊಗ್ಗ, ಅ.31: ಅರಬ್ಬಿ ಸಮುದ್ರದ ಲಕ್ಷದ್ವೀಪ ಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಶಿವಮೊಗ್ಗ ಜಿಲ್ಲೆಯ ಹಲವೆಡೆ ಬುಧವಾರ ಬಿದ್ದ ಧಾರಾಕಾರ ಮಳೆಯ ಪ್ರಮಾಣ ಗುರುವಾರ ಇಳಿಮುಖವಾಗಿದೆ.
ಗುರುವಾರ ಕೂಡ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಮುಂದುವರಿದಿತ್ತು. ಆಗಾಗ್ಗೆ ತುಂತುರು ಮಳೆಯಾಯಿತು. ಕೆಲವೆಡೆ ವರ್ಷಧಾರೆಯ ತೀವ್ರತೆ ಹೆಚ್ಚಿದ್ದರೂ, ನಿನ್ನೆಗಿಂತ ಕಡಿಮೆಯಿತ್ತು. ಉಳಿದಂತೆ ಶಿವಮೊಗ್ಗ ನಗರದ ಕೆಲವೆಡೆ ತುಂತುರು ಮಳೆಯಾಗಿದ್ದು ಹೊರತು ಪಡಿಸಿದರೆ ನಿನ್ನೆಯ ಅಬ್ಬರವಿರಲಿಲ್ಲ. ಆದರೆ ಗಾಳಿಯ ಬೀಸುವಿಕೆ ಜೋರಾಗಿತ್ತು. ಮಧ್ಯಾಹ್ನ ಬಿಸಿಲು ಕಾಣಿಸಿಕೊಂಡಿತು.
ಮುನ್ಸೂಚನೆ: ನವೆಂಬರ್ 1 ರವರೆಗೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಜೊತೆಗೆ 9 ಜಿಲ್ಲೆಗಳಲ್ಲಿ 'ಯೆಲ್ಲೋ ಅಲರ್ಟ್' ಘೋಷಿಸಿತ್ತು.
ಕಳೆದ ಕೆಲ ದಿನಗಳಿಂದ ಮಳೆ ಸಂಪೂರ್ಣ ಕಡಿಮೆಯಾಗಿ ಬಿಸಿಲು ಬೀಳಲಾರಂಭಿಸಿದ್ದರಿಂದ, ರೈತ ಸಮುದಾಯ ಸೇರಿದಂತೆ ಜಿಲ್ಲೆಯ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಮತ್ತೆ ವರ್ಷಧಾರೆಯಾಗಲಾರಂಭಿಸಿದ್ದು, ವಿಶೇಷವಾಗಿ ರೈತರ ನಿದ್ದೆಗೆಡುವಂತೆ ಮಾಡಿತ್ತು. ಕಟಾವಿಗೆ ಬಂದಿರುವ ಬೆಳೆ ಹಾಳಾಗುವ ಆತಂಕ ಉಂಟು ಮಾಡಿತ್ತು.