ಪತ್ರಕರ್ತ ನರಸಿಂಹಮೂರ್ತಿ ಬಂಧನ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಶಿವಮೊಗ್ಗ, ಅ.31: ಪ್ರಗತಿಪರ ಹೋರಾಟಗಾರ, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನ ಖಂಡಿಸಿ ಗುರುವಾರ ಪ್ರೆಸ್ ಟ್ರಸ್ಟ್ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು. ತತ್ಕ್ಷಣವೇ ಪತ್ರಕರ್ತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಅರ್ಪಿಸಿತು.
ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ಕಳೆದ ಹಲವಾರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ಬಹಿರಂಗವಾಗಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಪತ್ರಕರ್ತರಾಗಿ, ಬರಹಗಾರರಾಗಿಯೂ ಮನ್ನಣೆ ಗಳಿಸಿದ್ದಾರೆ. ಪ್ರಗತಿಪರ ಹೋರಾಟಗಳಲ್ಲಿಯೂ ಗುರುತಿಸಿಕೊಂಡು, ಜನರ ನೋವಿಗೆ ಸ್ಪಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಪ್ರಸಕ್ತ ನ್ಯಾಯಪಥ ಪತ್ರಿಕೆಯನ್ನು ಹೊರತರುವಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇವರ ವಿರುದ್ಧ ಸಲ್ಲದ ಆರೋಪಗಳನ್ನು ಹೊರಿಸಿ, ಎರಡು ದಶಕಗಳ ಹಿಂದಿನ ನಾನಾ ಆರೋಪ ಮುಂದಿಟ್ಟುಕೊಂಡು ದಿಢೀರ್ ಆಗಿ ಪೊಲೀಸರು ಬಂಧಿಸಿರುವುದು ಅಕ್ಷಮ್ಯ ಅಪರಾಧ. ಪತ್ರಕರ್ತರ ಮುಕ್ತ ಕಾರ್ಯನಿರ್ವಹಣೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಜನಪರ ಹೋರಾಟದ ಧ್ವನಿ ಹತ್ತಿಕ್ಕುವ ವ್ಯವಸ್ಥಿತ ಹುನ್ನಾರವಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕಾರಣದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು, ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕೂಲಂಕಷ ಪರಿಶೀಲನೆ ನಡೆಸಬೇಕು. ನರಸಿಂಹಮೂರ್ತಿಯವರ ಮೇಲೆ ಹೊರಿಸಲಾಗಿರುವ ಆರೋಪಗಳ ಬಗ್ಗೆ ನ್ಯಾಯಯುತವಾದ ತನಿಖೆ, ವಿಚಾರಣೆ ನಡೆಸಲು ಪೊಲೀಸ್ ಇಲಾಖೆಗೆ ಸೂಚಿಸಬೇಕು. ತಕ್ಷಣವೇ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತರಾದ ಎನ್.ಮಂಜುನಾಥ್, ಹುಲಿಮನೆ ತಿಮ್ಮಪ್ಪ, ಗೋಪಾಲ್ ಯಡೆಗೆರೆ, ಗಿರೀಶ್ ಉಮ್ರಾಯ್, ಗಜೇಂದ್ರಸ್ವಾಮಿ, ಸೂರ್ಯನಾರಾಯಣ್, ಶೃಂಗೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.