ದಿಲ್ಲಿ ಈಗ ಗ್ಯಾಸ್ ಚೇಂಬರ್: ಅರವಿಂದ ಕೇಜ್ರಿವಾಲ್
ಶಾಲಾ ಮಕ್ಕಳಿಗೆ 50 ಲಕ್ಷ ಮಾಸ್ಕ್ ವಿತರಣೆ
ಹೊಸದಿಲ್ಲಿ, ನ.1: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಪರದಾಡುತ್ತಿರುವ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ನಗರವು ಈಗ ಗ್ಯಾಸ್ ಚೇಂಬರ್ ಆಗಿದೆ ಎಂದು ಬಣ್ಣಿಸಿದರು. ವಾಯು ಮಾಲಿನ್ಯದಿಂದ ಪಾರಾಗಲು ಶಾಲಾ ಮಕ್ಕಳಿಗೆ ಉಸಿರಾಟದ ಮಾಸ್ಕ್ನ್ನು ವಿತರಣೆ ಮಾಡಲಾಗುವುದು ಎಂದಿದ್ದಾರೆ.
ದಿಲ್ಲಿ ವಾಯುಮಾಲಿನ್ಯ ಮಟ್ಟ ಹೆಚ್ಚಲು ನೆರೆಯ ರಾಜ್ಯಗಳಾದ ಹರ್ಯಾಣ ಹಾಗೂ ಪಂಜಾಬ್ ಸರಕಾರವನ್ನು ಕೇಜ್ರಿವಾಲ್ ಟೀಕಿಸಿದರು. ಈ ಎರಡು ರಾಜ್ಯಗಳ ರೈತರು ಕೊಯ್ಲು ಪೈರಿನ ಕೂಳೆ ಸುಡುತ್ತಿರುವ ಕಾರಣ ದಿಲ್ಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆ ಹೆಚ್ಚಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕ್ಯಾಪ್ಟನ್ ಅಂಕಲ್ ಹಾಗೂ ಖಟ್ಟರ್ ಅಂಕಲ್ಗೆ ನೀವು ಪತ್ರವನ್ನು ಬರೆದು ದಯವಿಟ್ಟು ನಮ್ಮ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಮನವಿ ಮಾಡಿ ಎಂದು ಶಾಲಾ ಮಕ್ಕಳಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ವಿನಂತಿಸಿದ್ದಾರೆ. ಪಂಜಾಬ್ ಹಾಗೂ ಹರ್ಯಾಣ ಮುಖ್ಯಮಂತ್ರಿಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಮನೋಹರ್ ಖಟ್ಟರ್ ಹೆಸರನ್ನು ಉಲ್ಲೇಖಿಸಿ ಈ ಮನವಿ ಮಾಡಿದ್ದಾರೆ.
ನೆರೆಯ ರಾಜ್ಯಗಳಲ್ಲಿ ಕಟಾವು ಬಳಿಕ ಉಳಿದ ಪೈರಿನ ಕೂಳೆ ಸುಡುತ್ತಿರುವ ಕಾರಣ ದಿಲ್ಲಿ ಈಗ ಗ್ಯಾಸ್ ಚೇಂಬರ್ನಂತಾಗಿದೆ. ವಿಷಕಾರಿ ಗಾಳಿಯಿಂದ ಸ್ವತಃ ರಕ್ಷಣೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಖಾಸಗಿ ಹಾಗೂ ಸರಕಾರಿ ಶಾಲೆಗಳಿಗೆ ನಾವು ಇಂದಿನಿಂದಲೇ 50 ಲಕ್ಷ ಎನ್95 ಮಾಸ್ಕ್ಗಳನ್ನು ವಿತರಿಸಲು ಆರಂಭಿಸಿದ್ದೇವೆ. ದಿಲ್ಲಿ ನಿವಾಸಿಗಳು ಅಗತ್ಯವಿದ್ದಾಗ ಮಾಸ್ಕ್ ಧರಿಸಿ ಎಂದು ವಿನಂತಿಸಿಕೊಳ್ಳುವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.