ರಾಜ್ಯ ಸರಕಾರದ ನಿಲುವಿಗೆ ಆಕ್ರೋಶ: ರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿದ ಡಿ.ಸಿ.ತಮ್ಮಣ್ಣ
![ರಾಜ್ಯ ಸರಕಾರದ ನಿಲುವಿಗೆ ಆಕ್ರೋಶ: ರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿದ ಡಿ.ಸಿ.ತಮ್ಮಣ್ಣ ರಾಜ್ಯ ಸರಕಾರದ ನಿಲುವಿಗೆ ಆಕ್ರೋಶ: ರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿದ ಡಿ.ಸಿ.ತಮ್ಮಣ್ಣ](https://www.varthabharati.in/sites/default/files/images/articles/2019/11/2/217449-1572633257.jpg)
ಮಂಡ್ಯ, ನ.1: ನಾಡ ಹಬ್ಬವಾದ ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟಕ್ಕೆ ಪ್ರಾಧಾನ್ಯತೆ ನೀಡದೆ ರಾಷ್ಟ್ರಧ್ವಜಾರೋಹಣಕ್ಕೆ ಆದ್ಯತೆ ನೀಡಿರುವ ರಾಜ್ಯ ಸರಕಾರದ ನಿಲುವನ್ನು ವಿರೋಧಿಸಿ ಕನ್ನಡ ರಾಜ್ಯೋತ್ಸವವನ್ನು ಕಾರ್ಯಕ್ರಮ ಬಹಿಷ್ಕರಿಸಿರುವುದಾಗಿ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಕೆ.ಎಂ.ದೊಡ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಮರ್ಜಿಯಲ್ಲಿರುವ ರಾಜ್ಯ ಬಿಜೆಪಿ ಸರಕಾರ ಕನ್ನಡ ಧ್ವಜಾರೋಹಣಕ್ಕೆ ಆದ್ಯತೆ ನೀಡದೆ ರಾಷ್ಟ್ರ ಧ್ವಜಾರೋಹಣಕ್ಕೆ ಪ್ರಾಧಾನ್ಯತೆ ನೀಡಿರುವುದನ್ನು ನಾನು ವಿರೋಧಿಸುತ್ತೇನೆ ಎಂದರು.
ಇದು ರಾಷ್ಟ್ರೀಯ ಹಬ್ಬವಲ್ಲ. ಕರ್ನಾಟಕದ ಏಕೀಕರಣದ ಸಂಕೇತವಾಗಿ ನಾಡಧ್ವಜವನ್ನು ಆರೋಹಣ ಮಾಡುವುದು ನಮ್ಮ ಕರ್ತವ್ಯ. ಕನ್ನಡದ ಬಾವುಟ ಹಾರಿಸಬಾರದಾದರೆ ಸರಕಾರ ಯಾಕಾಗಿ ಕನ್ನಡ ರಾಜ್ಯೋತ್ಸವನ್ನು ಆಚರಿಸಬೇಕು? ರದ್ದುಪಡಿಸಲಿ ಎಂದು ಕಿಡಿಕಾರಿದರು.
ಕೇಂದ್ರ ಸರಕಾರ ಈಗಾಗಲೇ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಹುನ್ನಾರ ನಡೆಸಿದೆ. ಈಗ ಕನ್ನಡ ಧ್ವಜಕ್ಕೂ ಸಂಚಕಾರ ತರುವ ಪ್ರಯತ್ನ ನಡೆದಿದೆ. ಕೇವಲ ಕುರ್ಚಿ ಆಸೆಗಾಗಿ ಕೇಂದ್ರ ಹೇಳಿದಂತೆಲ್ಲ ಕೇಳುವ ರಾಜ್ಯ ಬಿಜೆಪಿ ಸರಕಾರದವರಿಗೆ ನಾಡಿನ ಹಿತರಕ್ಷಣೆಗಿಂತ ತಮ್ಮ ಕುರ್ಚಿಯೇ ಮುಖ್ಯವಾಗಿದೆ ಎಂದು ಅವರು ಆರೋಪಿಸಿದರು.
ಕೇರಳದ ಮಂಜೇಶ್ವರ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಕಮರುದ್ದೀನ್ ಅವರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದು ಹೆಮ್ಮೆಯ ವಿಷಯ ಎಂದರು.