ಬಲಿಷ್ಠ ಆರ್ಥಿಕ, ತಾಂತ್ರಿಕತೆಯ ರಾಷ್ಟವಾಗಿ ಪರಿವರ್ತಿಸುವಲ್ಲಿ ಯುವ ಜನರ ಪಾತ್ರ ಹಿರಿದು: ವೆಂಕಯ್ಯ ನಾಯ್ಡು
ಸುರತ್ಕಲ್ ಎನ್ ಐಟಿಕೆ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ
ಮಂಗಳೂರು: ಭಾರತವನ್ನು ಬಲಿಷ್ಠ ಆರ್ಥಿಕ ಮತ್ತು ತಾಂತ್ರಿಕತೆಯ ರಾಷ್ಟವಾಗಿ ಪರಿವರ್ತಿಸುವಲ್ಲಿ ದೇಶದ ಯುವ ಜನರ ಪಾತ್ರ ಹಿರಿದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಯುವ ಇಂಜಿನಿಯರ್ ಗಳಿಗೆ ಕರೆ ನೀಡಿದರು.
ಅವರು ಇಂದು ಎನ್ ಐಟಿಕೆ ಸುರತ್ಕಲ್ ಇದರ ವಜ್ರಮಹೋತ್ಸವ ವರ್ಷದ 17ನೆ ಘಟಿಕೋತ್ಸವ ಭಾಷಣ ಮಾಡುತ್ತಾ ತಿಳಿಸಿದರು.
ದೇಶದ ತಂತ್ರಜ್ಞಾನದ ಪ್ರಗತಿಯ ಫಲವನ್ನು ಮರಳಿ ದೇಶದ ಜನತೆಗೆ ನೀಡುವ ಸಾಮಾಜಿಕ ಹೊಣೆಗಾರಿಕೆ ಯುವ ಇಂಜಿನಿಯರ್ ಗಳು ಮರೆಯಬಾರದು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ, ತಾಪಮಾನದ ಬದಲಾವಣೆ ಸೇರಿದಂತೆ ವಿವಿಧ ಜಾಗತಿಕ ಸವಾಲುಗಳನ್ನು ಎದುರಿಸಲು ಯುವ ಇಂಜಿನಿಯರುಗಳು ಸಿದ್ಧರಾಗುವುದರೊಂದಿಗೆ ಸುಸ್ಥಿತರ ಅಭಿವೃದ್ಧಿಗೆ ಕೊಡುಗೆ ನೀಡಬೇಕು, ಪರಿಸರದೊಂದಿಗಿನ ನಮ್ಮ ಸಂಸ್ಕೃತಿಯ ನಮ್ಮ ಮುಂದಿನ ಭವಿಷ್ಯ ವಾಗಿದೆ ಎಂದರು.
ತಾಂತ್ರಿಕ ಕ್ಷೇತ್ರದ ಸಂಶೋಧನೆ ಮತ್ತು ಆವಿಷ್ಕಾರಗಳು ಸಾಮಾಜಿಕ, ಆರ್ಥಿಕ ಮತ್ತು ದೇಶದ ಸೇನೆಗೆ ಸಹಕಾರಿಯಾಗುವಂತಾಗಬೇಕು. ದಿ.ಶ್ರೀನಿವಾಸ ಮಲ್ಯರಿಂದ ಸ್ಥಾಪನೆಯಾದ ಎನ್ಐಟಿಕೆ ದೇಶದ ಪ್ರಮುಖ 10 ಸಂಸ್ಥೆಗಳಲ್ಲಿ ಒಂದು ಎನ್ನವ ಹೆಗ್ಗಳಿಕೆಯ ಸ್ಥಾನವನ್ನು ಪಡೆದಿದೆ. ದೇಶಕ್ಕೆ ಉತ್ತಮ ತಂತ್ರಜ್ಞರನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲೂ ಉನ್ನತ ಸ್ಥಾನ ಪಡೆಯುವಂತಾಗಬೇಕು ಎಂದು ವೆಂಕಯ್ಯನಾಯ್ಡು ತಿಳಿಸಿದ್ದಾರೆ.
ಒಂದು ಕಾಲದಲ್ಲಿ ವಿಶ್ವ ಗುರುವಿನ ಸ್ಥಾನ ಪಡೆದಿದ್ದ ಭಾರತ ಮತ್ತೆ ಆ ಸ್ಥಾನವನ್ನು ಪಡೆಯುವ ಸಂಪನ್ಮೂಲವನ್ನು ಹೊಂದಿದೆ. ಪರಿಶ್ರಮದಿಂದ ಯುವ ತಂತ್ರಜ್ಞರ ಪ್ರಯತ್ನದಿಂದ ಮತ್ತೆ ಈ ಸ್ಥಾನವನ್ನು ಪಡೆಯಬೇಕು ಎಂದರು.
ತಂತ್ರಜ್ಞಾನದ ಪರಿಣಾಮವಾಗಿ ಪಾರದರ್ಶಕ ಆಡಳಿತ ನೀಡಲು ಸಹಾಯವಾಗಿದೆ. ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ಮಾರಕ, ಸಾಮಾನ್ಯ ಜನರು ನೆಮ್ಮದಿಯಿಂದ ಬದುಕಲು ವಿಜ್ಞಾನ, ತಂತ್ರಜ್ಞಾನ ಸಹಾಯವಾಗಬೇಕು. ದೇಶದ ಜನಸಂಖ್ಯೆಯಲ್ಲಿ ಶೇ. 65 ರಷ್ಟು ಯುವ ಜನರು. ಈ ನಿಟ್ಟಿನಲ್ಲಿ ದೇಶದ ಶಕ್ತಿಯಾಗಿದ್ದಾರೆ. ಯುವ ಜನರು ಉದ್ಯೋಗ ಹುಡುಕವವರಾಗದೆ, ಉದ್ಯೋಗ ನೀಡುವ ದೇಶ ಸಂಪತ್ತನ್ನು ಹೆಚ್ಚಿಸಲು ಕೌಶಲಗಳನ್ನುಗಳಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಎನ್ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಬಲವೀರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಪ ನಿರ್ದೇಶಕ ಪ್ರೊ. ಅನಂತನಾರಾಯಣ, ಕುಲಸಚಿವ ರವೀಂದ್ರ ನಾಥ್, ಅಕಾಡಮಿಕ್ ಡೀನ್ ನಿತ್ಯಾನಂದ ಶೆಟ್ಟಿ, ಡಾ. ಎಂ.ಅರುಣ್ ಅಸ್ಲೂರು ಮೊದಲಾದವರು ಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದಲ್ಲಿ ಇಬ್ಬರಿಗೆ ಚಿನ್ನದ ಪದಕ 9 ಮಂದಿಗೆ ಬಿಟೆಕ್ ಚಿನ್ನದ ಪದಕ ,116 ಮಂದಿಗೆ ಪಿಎಚ್ ಡಿ ಪದವಿ, 634 ಮಂದಿಗೆ ಸ್ನಾತಕೋತ್ತರ ಪದವಿ, 795 ಮಂದಿಗೆ ಬಿಟೆಕ್ ಪದವಿ ಪ್ರದಾನ ಮಾಡಲಾಯಿತು.