ಮಂಗಳೂರು: ಶಕ್ತಿ ಶಿಕ್ಷಣ ಸಂಸ್ಥೆಗಳಿಂದ ಸ್ವಚ್ಛ ಆಂದೋಲನ
![ಮಂಗಳೂರು: ಶಕ್ತಿ ಶಿಕ್ಷಣ ಸಂಸ್ಥೆಗಳಿಂದ ಸ್ವಚ್ಛ ಆಂದೋಲನ ಮಂಗಳೂರು: ಶಕ್ತಿ ಶಿಕ್ಷಣ ಸಂಸ್ಥೆಗಳಿಂದ ಸ್ವಚ್ಛ ಆಂದೋಲನ](https://www.varthabharati.in/sites/default/files/images/articles/2019/11/2/217500-1572704053.jpeg)
ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆ, ಶಕ್ತಿ ಪಿ.ಯು. ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರರು, ಪೋಷಕರು ಹಾಗೂ ಸಾರ್ವಜನಿಕರು ಸೇರಿ ಅ. 2ರಿಂದ ಸ್ವಚ್ಛ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸ್ವಚ್ಛ ಆಂದೋಲನದ ಜಾಗ್ರತಿ ಜಾಥಾ ಏರ್ಪಡಿಸಲಾಯಿತು.
ಜಾಥಾದ ಉದ್ಘಾಟನೆಯನ್ನು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಸ್ವಚ್ಛ ಅಭಿಯಾನದ ಸಂಚಾಲಕ ಶ್ರೀ ರಂಜನ್ ಬೆಲ್ಲರ್ಪಾಡಿ ಅವರು ನೆರವೇರಿಸಿ ಭಾರತ ಮಾತೆ ನಮ್ಮೆಲ್ಲರ ತಾಯಿ. ಸ್ವಚ್ಛ ಪರಿಸರವನ್ನು ಕಾಪಾಡಿಕೊಂಡು ನಿರ್ಮಲ ಮನಸ್ಸಿನಿಂದ ನಾವು ತಾಯಿಯನ್ನು ಆರಾಧಿಸಬೇಕು, ಗೌರವಿಸಬೇಕು. ಸ್ವಚ್ಛ ಆಂದೋಲನಕ್ಕೆ ಸಮಾರೋಪ ಎಂಬುದಿಲ್ಲ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ, ಅದು ನಮ್ಮ ಮನೆಯಿಂದ ಆರಂಭವಾಗಿ, ನೆರೆಕೆರೆ, ಸಮಾಜ, ಊರು, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದೆಲ್ಲೆಡೆ ಹಬ್ಬಿಕೊಳ್ಳಬೇಕು. ಇಂದಿನಿಂದಲೇ ಸ್ವಚ್ಛತಾ ಯಜ್ಞದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ಸರ್ ಅವರು ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಭಗವಂತ ವಾಸವಾಗಿರುತ್ತಾನೆ, ಅಲ್ಲಿ ಮನಸ್ಸು ನೆಮ್ಮದಿಯಿಂದ ಇರಲು ಸಾಧ್ಯ. ಈ ಭೂಮಿ ಮತ್ತು ಪರಿಸರ ನಮಗೆ ದೇವರ ದೊಡ್ಡ ಕೊಡುಗೆ. ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಗೆ ನಾವು ಬದ್ಧರಾಗಿ ಬದುಕಿದಾಗ ಜೀವನ ಸಾರ್ಥಕ ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅತಿಥಿಗಳನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾಯ್ಕ್ ಹಾಗೂ ಅವರ ಪತ್ನಿ ಸಗುಣ ನಾಯ್ಕ್ ಹೂ, ಹಣ್ಣು ಹಂಪಲು ನೀಡಿ ಸ್ವಾಗತಿಸಿದರು.
ಶಕ್ತಿ ಪಿ.ಯು ಕಾಲೇಜಿನ ಆವರಣದಿಂದ ಹೊರಟ ಜಾಥಾದಲ್ಲಿ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಶಕ್ತಿನಗರದ ಪರಿಸರದಲ್ಲಿ ಸ್ವಚ್ಛತಾ ಜಾಗ್ರತಿ ಮೂಡಿಸಿದರು. ವಿದ್ಯಾರ್ಥಿಗಳನ್ನು ಹನ್ನೊಂದು ತಂಡಗಳನ್ನಾಗಿ ಬೇರ್ಪಡಿಸಿ ಶಕ್ತಿನಗರದ ಹನ್ನೊಂದು ಆಯ್ದ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.
ದತ್ತನಗರ ನಿವಾಸಿಗಳ ಸಂಘದ ಅಧ್ಯಕ್ಷ ಎಚ್.ಕೆ ಪುರುಷೋತ್ತಮ, ಸಾನಿಧ್ಯ ಭಿನ್ನ ಸಾಮರ್ಥ್ಯದ ಶಾಲೆಯ ಸಂಚಾಲಕ ವಸಂತ ಶೆಟ್ಟಿ, ವಕೀಲೆ ಸುಮನಾ ಶರಣ್, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ ಕುಮಾರ್, ಸಂಜಯನಗರದ ವಿನೋದ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘದ ಅಧ್ಯಕ್ಷೆ ಹೇಮಲತಾ, ಶಿವಶಕ್ತಿ ಸಂಘದ ಅಧ್ಯಕ್ಷ ಸುರೇಶ್ ಸ್ವಚ್ಛ ಜಾಗೃತಿಯ ಕುರಿತು ಮಾತನಾಡಿದರು.
ಕೆ.ಸಿ ನಾಯ್ಕ್ ಮಾತನಾಡಿ, ಶಕ್ತಿನಗರದ ನಾಗರಿಕರಾದ ನಾವೆಲ್ಲ ಒಂದಾಗಿ ಈ ನಮ್ಮ ಊರನ್ನು ಮಂಗಳೂರಿನಲ್ಲೇ ಒಂದು ಆದರ್ಶ ಉಪನಗರವನ್ನಾಗಿ ಮಾಡಬೇಕೆಂದು ಕರೆ ನೀಡಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟಿನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ., ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲಿನ ನೀಮಾ ಸಕ್ಸೇನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀನಿಧಿ ಅಭಯಂಕರ್ ಕಾರ್ಯಕ್ರಮ ನಿರೂಪಿಸಿದರು.
ಶಕ್ತಿನಗರದ ರಿಕ್ಷಾ ಮಾಲಕರ-ಚಾಲಕರ ಸಂಘ, ದತ್ತನಗರ ನಿವಾಸಿಗಳ ಸಂಘಕ್ಕೆ ಪದವು ಫ್ರೆಂಡ್ಸ್ ಕ್ಲಬ್, ಜ್ಞಾನದೀಪ ಮಹಿಳಾ ಮಂಡಳಿ, ಶ್ರೀ ಕೃಷ್ಣ ಭಜನಾ ಮಂದಿರ, ಹಿಂದೂ ಜಾಗರಣಾ ವೇದಿಕೆ ವೀರಕೇಸರಿ ಶಾಖೆ, ಮುತ್ತಪ್ಪನ ಗುಡಿ ಕ್ಷೇತ್ರ, ಶಿವ ಶಕ್ತಿ ಫ್ರೆಂಡ್ಸ್ ಸರ್ಕಲ್, ಶ್ರೀ ದುರ್ಗಾ ಮಹಾಮಾಯಿ ದೇವಸ್ಥಾನ, ರಮಾ ಶಕ್ತಿ ಮಿಶನ್, ಶ್ರೀ ರಾಜ ರಾಜೇಶ್ವರಿ ದೇವಸ್ಥಾನ, ಬಾಲಗೋಕುಲ ಶಕ್ತಿನಗರದ ಕಾರ್ಯಕರ್ತರು ಸ್ವಚ್ಛ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಂ.ಆರ್.ಪಿ.ಎಲ್, ನವ ಮಂಗಳೂರು ಬಂದರು ಮಂಡಳಿ, ಅದಾನಿ ಸಮೂಹ, ನಂದಿನಿ, ಕ್ಯಾಂಪ್ಕೊ ಹಾಗೂ ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೊ-ಆಪರೇಟಿವ್ ಸೊಸೈಟಿ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ಒದಗಿಸಿದರು.