ಐಎಸ್ಪಿಆರ್ಎಲ್ ವಿರುದ್ಧ ನ. 4ಕ್ಕೆ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ, ಮನವಿ
![ಐಎಸ್ಪಿಆರ್ಎಲ್ ವಿರುದ್ಧ ನ. 4ಕ್ಕೆ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ, ಮನವಿ ಐಎಸ್ಪಿಆರ್ಎಲ್ ವಿರುದ್ಧ ನ. 4ಕ್ಕೆ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ, ಮನವಿ](https://www.varthabharati.in/sites/default/files/images/articles/2019/11/2/217510-1572705511.jpg)
ಉಡುಪಿ, ನ.2: ಕೇಂದ್ರ ಸರಕಾರ ಸ್ವಾಮ್ಯದ ಕಚ್ಛಾತೈಲ ಸಂಗ್ರಹಾಗಾರ ಐಎಸ್ಪಿಆರ್ಎಲ್ನ ಎರಡನೇ ಹಂತದ ಯೋಜನಾ ವಿಸ್ತರಣೆಯನ್ನು ವಿರೋಧಿಸಿ, ಇಲ್ಲಿನ ನಿರ್ವಸತಿಗರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ.4ರಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸ ಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಪುವಿನ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಪ್ರಕಟಿಸಿದ್ದಾರೆ.
ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಬೆಳಗ್ಗೆ 10:00 ಗಂಟೆಗೆ ಮಜೂರು ಸರ್ಕಲ್ ಬಳಿಯಿಂದ ಯೋಜನೆಯ ಸಂತ್ರಸ್ಥರು, ನಿರ್ವಸಿತರು ಹಾಗೂ ಸಾರ್ವಜನಿಕರು ಬೃಹತ್ ಪಾದಯಾತ್ರೆಯಲ್ಲಿ ಐಎಸ್ಪಿಆರ್ಎಲ್ ಪಾದೂರು ಯೋಜನಾ ಪ್ರದೇಶದವರೆಗೆ ಸಾಗಿ, ಕಂಪೆನಿಯ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ. ಕೊನೆಗೆ ಜಿಲ್ಲಾಧಿಕಾರಿಯವರಿಗೆ ಜನರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅರ್ಪಿಸಲಾಗುತ್ತದೆ ಎಂದವರು ಹೇಳಿದರು.
ದೇಶದ ತುರ್ತು ಅಗತ್ಯಗಳಿಗೆ ಬೇಕಾದ ಕಚ್ಛಾತೈಲದ ಸಂಗ್ರಹದ ಯೋಜನೆ ಯನ್ನು ಖಾಸಗಿಯವರಿಗೆ -ಅಂಬಾನಿ ಗುಂಪಿಗೆ- ನೀಡುವ ಪ್ರಸ್ತಾಪವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಲ್ಲದೇ ಯೋಜನೆಯಿಂದ ಸಂತ್ರಸ್ಥರಾದ ಅನೇಕ ಮಂದಿಗೆ ಇನ್ನೂ ಸೂಕ್ತವಾಗಿ ಪರಿಹಾರ ಸಿಕ್ಕಿಲ್ಲ. ಅವರಿಗೆ ಪರಿಹಾರ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಅಲ್ಲದೇ ಮೊದಲ ಹಂತದ ಕಾಮಗಾರಿಯ ವೇಳೆ ಬಂಡೆಗಳ ಸ್ಪೋಟದಿಂದ ಅನೇಕ ಮನೆ, ಪರಿಸರಗಳಿಗೆ ಹಾನಿಯಾಗಿದೆ. ತಾವು ಶಾಸಕ, ಸಚಿವರಾಗಿ ವೇಳೆ ಹೋರಾಟದ ಮೂಲಕ 48 ಮಂದಿಗೆ ತಲಾ ಒಂದು ಲಕ್ಷ ರೂ.ನಂತೆ ಪರಿಹಾರ ದೊರಕಿಸಿಕೊಟ್ಟಿದ್ದೇನೆ. ಆ ಬಳಿಕ ಇನ್ನೂ 120 ಮಂದಿ ಪರಿಹಾರ ಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವರಿಗೆಲ್ಲರಿಗೂ ಪರಿಹಾರ ನೀಡಬೇಕೆಂಬುದು ತಮ್ಮ ಬೇಡಿಕೆಯಲ್ಲಿ ಸೇರಿದೆ.
ಎರಡನೇ ಹಂತದಲ್ಲಿ ಜನವಸತಿ ಪ್ರದೇಶವನ್ನೂ ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಭೂಸ್ವಾಧೀನಕ್ಕಾಗಿ ಬೆದರಿಕೆ, ಬಲಾತ್ಕಾರವನ್ನೂ ನಡೆಸ ಲಾಗುತ್ತಿದೆ. ಇದಕ್ಕೆ ನಮ್ಮೆಲ್ಲರ ಸ್ಪಷ್ಟ ವಿರೋಧವಿದೆ. ಭೂಸ್ವಾಧೀನಕ್ಕಾಗಿ ಕೇಂದ್ರ ಸರಕಾರ ಮಾಡಿರುವ ಮಾರ್ಗಸೂಚಿಗಳಂತೆ ಕ್ರಮ ಜರಗಬೇಕು. ಯೋಜನಾ ಪ್ರದೇಶದ ಶೇ.80ರಷ್ಟು ಜನರ ಒಪ್ಪಿಗೆ ದೊರೆಯಬೇಕು. ಅಲ್ಲಿ ಸಮಾಲೋಚನಾ ಸಭೆ ನಡೆಸಬೇಕು. ಮಾರುಕಟ್ಟೆ ಧಾರಣೆಯ ಮೂರು ಪಟ್ಟು ಪರಿಹಾರವನ್ನು ಸಂತ್ರಸ್ಥರಿಗೆ ನೀಡಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳುವ ಕಳ್ತೂರು, ಪಾದೂರು, ಹೇರೂರು, ಕುತ್ಯಾರು, ಶಾಂತಿಗುಡ್ಡೆ, ಮಜೂರು ಪರಿಸರದಲ್ಲಿರುವ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ, ದೇವಸ್ಥಾನ, ದೈವಸ್ಥಾನ, ಚರ್ಚ್, ಮಸೀದಿ ಹಾಗೂ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯೋಜನಾ ಪ್ರದೇಶದಲ್ಲಿ ಸ್ಥಳೀಯರ ‘ಸಾರ್ವಜನಿಕ ಅಭಿಪ್ರಾಯ ಮಂಡನ’ ಸಭೆ ಕರೆದು ಅಹವಾಲು ಸ್ವೀಕರಿಸಬೇಕು ಎಂದರು.
ಅಲ್ಲದೇ ಮೊದಲ ಹಂತದ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ನಿರ್ವಸತಿಗರ ಮನೆಗೊಂದು ಖಾಯಂ ಉದ್ಯೋಗ ನೀಡಬೇಕು. ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ನಿರ್ವಸತಿಗರ ಕಾಲೋನಿ ಸ್ಥಾಪಿಸಬೇಕು. ಯೋಜನಾ ಪ್ರದೇಶದ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬುದು ಸಹ ನಮ್ಮ ಬೇಡಿಕೆಗಳಲ್ಲಿ ಸೇರಿದೆ ಎಂದರು.
ಅಲ್ಲದೇ ಈ ಯೋಜನೆಗಾಗಿ ಹೇರೂರು ಸಮೀಪ ಪಾಪನಾಶಿನಿ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನೂ ರೂಪಿಸಲಾಗಿದ್ದು, ಇದರಿಂದ ಬಹಳಷ್ಟು ಪ್ರದೇಶ ಮುಳುಗಡೆಯಾಗಲಿದ್ದು, ಇನ್ನಷ್ಟು ಮಂದಿ ನಿರ್ವಸತಿಗರಾಗಲಿದ್ದಾರೆ ಎಂದೂ ಅವರು ಆರೋಪಿಸಿದರು.
ಸಂತ್ರಸ್ಥರು, ನಿರ್ವಸತಿಗರ ಬೇಡಿಕೆಗಳ ಈಡೇರಿಕೆಗಾಗಿ ಈಗ ಸಾಂಕೇತಿಕ ಪ್ರತಿಭಟನೆಯನ್ನು ಮಾಡುತಿದ್ದು, ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂಧಿಸದಿದ್ದರೆ ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ತೀವ್ರ ರೀತಿಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದವರು ಎಚ್ಚರಿಸಿದರು.
![](https://www.varthabharati.in/sites/default/files/images/galllery/2019/11/2/UD-N2 ISPRL PADUR1.jpg)