ಕಲ್ಲಡ್ಕ: ಕಲಿ-ಕಲಿಸು ಕಾರ್ಯಚಟುವಟಿಕೆಗೆ ಚಾಲನೆ
![ಕಲ್ಲಡ್ಕ: ಕಲಿ-ಕಲಿಸು ಕಾರ್ಯಚಟುವಟಿಕೆಗೆ ಚಾಲನೆ ಕಲ್ಲಡ್ಕ: ಕಲಿ-ಕಲಿಸು ಕಾರ್ಯಚಟುವಟಿಕೆಗೆ ಚಾಲನೆ](https://www.varthabharati.in/sites/default/files/images/articles/2019/11/2/217550-1572712887.jpg)
ಬಂಟ್ವಾಳ : ಬೆಂಗಳೂರಿನ ಇಂಡಿಯ ಫೌಂಡೇಶನ್ ಫಾರ್ ದಿ ಆರ್ಟ್ಸ್ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಕಲಿ-ಕಲಿಸು ಯೋಜನೆಯಡಿ ಕಲಾ ಬರಹ ಮತ್ತು ಕಲಾಪತ್ರಿಕೆ ಎಂಬ ಶೀರ್ಷಿಕೆಯಲ್ಲಿ ಅನುಭವದ ಕಲಿಕೆಯ ಕಾರ್ಯಚಟುವಟಿಕೆಗಳನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಉತ್ತೇಜಿಸಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಶಾಲೆಗಳಲ್ಲಿ ದೊರಕುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಚಟುವಟಿಕೆಗಳು ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು, ಪ್ರಶ್ನಿಸುವ ಮನೋಭಾವವನ್ನು ಮಕ್ಕಳು ರೂಢಿಸಿಕೊಳ್ಳಲು ಚಟುವಟಿಕೆ ಸಹಕಾರಿಯಾಗುತ್ತದೆ. ಬರೆಯುವ ಮೂಲಕ ಪ್ರಜ್ಞಾವಂತರಾಗಲು ಸಾಧ್ಯ ಎಂದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಕಲಿಕಾ ಉತ್ತೇಜನಕ್ಕಾಗಿ ದೊರಕುವ ಸೌಲಭ್ಯಗಳನ್ನು ಸದುಪಯೋಗಪಡಿಸುವಂತೆ ತಿಳಿಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಕಲಿಕಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮುಖ್ಯ ಶಿಕ್ಷಕ ಎ.ಅಶ್ರಫ್ ಭಾಗವಹಿಸಿದ್ದರು. ಮೌನೇಶ ವಿಶ್ವಕರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕ ಅಶ್ರಫ್ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ವಾರಿಜಾಕ್ಷಿ ವಂದಿಸಿದರು.