ಮಂಡ್ಯ: ತವರಿಗೆ ಮರಳಿದ ನಿವೃತ್ತ ಯೋಧನಿಗೆ ಸ್ವಾಗತ
ಮಂಡ್ಯ, ನ.2: ಭಾರತೀಯ ಸೇನೆಯ ಬಿಎಸ್ಎಫ್ ಯೋಧರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಶನಿವಾರ ತವರಿಗೆ ಆಗಮಿಸಿದ ಕೊತ್ತತ್ತಿ ಗ್ರಾಮದ ಡಿ.ಸತೀಶ್ ಅವರನ್ನು ಮಂಡ್ಯ ಜಿಲ್ಲಾ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು.
ಕರಾವಳಿ ಒಕ್ಕೂಟದ ಅಧ್ಯಕ್ಷ ಎಸ್.ಶ್ರೀನಿವಾಸ ಶೆಟ್ಟಿ ಮಾತನಾಡಿ, ಸತೀಶ್ ಅವರು ಕಳೆದ 25 ವರ್ಷಗಳ ಹಿಂದೆ ಬಿಎಸ್ಎಫ್ ಸೇರಿ ಸಾರ್ಥಕ ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಆಗಮಿಸಿದ್ದಾರೆ. ಲಾಲ್ಬಹದ್ದೂರ್ ಶಾಸ್ತ್ರಿ ಅವರು ಜೈಜವಾನ್- ಜೈಕಿಸಾನ್ ಎಂದಿದ್ದರು. ರೈತರಂತೆಯೇ ಯೋಧರು ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕರಾವಳಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ಜಗನ್ನಾಥ್ ಶೆಟ್ಟಿ, ಪ್ರಶಾಂತ್, ಜಿಲ್ಲಾ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿ.ಜಿ.ಲಿಂಗೇಗೌಡ, ಎಂ.ಅರುಣ, ಜಿ.ತ್ರಿವೇಣಿ, ಎಸ್.ಎಸ್.ವಿನಯ್ಕುಮಾರ್, ಆರ್.ಮಂಜುಳಾ, ಎಂ.ಆರ್.ಚೈತ್ರ, ಅನುಷ, ವಿನುತ, ಬಿ.ಲಕ್ಷ್ಮೀ ಸೇರಿ ಅನೇಕ ಮಂದಿ ಈ ವೇಳೆ ಹಾಜರಿದ್ದರು.