ಆಡಿಯೋ ವಿಚಾರ ಸುಪ್ರೀಂಕೋರ್ಟ್ನಲ್ಲಿ ಹೇಳಿದರೆ....: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಎಸ್ವೈ ಹೇಳಿದ್ದೇನು ?
![ಆಡಿಯೋ ವಿಚಾರ ಸುಪ್ರೀಂಕೋರ್ಟ್ನಲ್ಲಿ ಹೇಳಿದರೆ....: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಎಸ್ವೈ ಹೇಳಿದ್ದೇನು ? ಆಡಿಯೋ ವಿಚಾರ ಸುಪ್ರೀಂಕೋರ್ಟ್ನಲ್ಲಿ ಹೇಳಿದರೆ....: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಬಿಎಸ್ವೈ ಹೇಳಿದ್ದೇನು ?](https://www.varthabharati.in/sites/default/files/images/articles/2019/11/3/217664-1572794531.jpg)
ಬೆಂಗಳೂರು, ನ.3: ಶಾಸಕರು ಅವರದೇ ಆದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಗೊಂದಲವನ್ನುಂಟು ಮಾಡಲು ರಾಜ್ಯಪಾಲರನ್ನು ಭೇಟಿಯಾಗಿ ದೂರು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.
ರವಿವಾರ ನಗರದ ಜೆ.ಎನ್.ಟಾಟಾ ಆಡಿಟೋರಿಯಂನಲ್ಲಿ ಕರ್ನಾಟಕ ವನ್ನಿಯಕುಲ ಕ್ಷತ್ರಿಯ ಸೇವಾ ಸಂಘಂ ಆಯೋಜಿಸಿದ್ದ ವನ್ನಿಯರ್ ಪುರಾಣ ಮತ್ತು ಕರ್ನಾಟಕದಲ್ಲಿ ವನ್ನಿಯರ್ ಎಂಬ ಲೇಖನ ಒಳಗೊಂಡಿರುವ ಅಗ್ನಿ ಎಂಬ ಗ್ರಂಥ ಬಿಡುಗಡೆ ಕಾರ್ಯಕ್ರಮಕ್ಕೆ ಭಾಗಿಯಾಗುವ ಮೊದಲು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರಿಗೆ ಸಂಬಂಧಪಟ್ಟಂತೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದೇನೆ ಅಷ್ಟೆ. ಬೇರೆ ಯಾವ ವಿಚಾರವನ್ನೂ ಹೇಳಿಲ್ಲ. ಆದರೆ, ಕಾಂಗ್ರೆಸ್ನವರು ಗೊಂದಲವನ್ನುಂಟು ಮಾಡಲು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ಅನರ್ಹ ಶಾಸಕರಿಗೆ ಬಿಜೆಪಿ ಪಕ್ಷ ಚುನಾವಣೆಗೆ ನಿಲ್ಲಲು ಟಿಕೆಟ್ ನೀಡುತ್ತದೆ ಎಂದು ಹೇಳಿದ್ದಾರೆ. ವಕೀಲರಾಗಿ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರಿಗೆ ಯಾವುದನ್ನು ಮಾತನಾಡಬೇಕು. ಮಾತನಾಡಬಾರದು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಎಲ್ಲ ವಿಚಾರದಲ್ಲೂ ನಾನೆ ದೊಡ್ಡ ನಾಯಕ ಎಂಬಂತೆ ಬಿಂಬಿಸಿಕೊಳ್ಳುತ್ತಾರೆ ಎಂದು ಟೀಕಿಸಿದರು.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ನಾನು ರಾಜೀನಾಮೆ ಕೊಡಬೇಕೆಂದು ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಿದ್ದಾರೆ. ಆದರೆ, ಜನರೇ ಅವರಿಗೆ ಬರುವ ಉಪ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲೇ ಅವರಿಗೆ ಗೌರವವಿಲ್ಲ. ಆಡಿಯೋ ವಿಚಾರವನ್ನು ಸುಪ್ರೀಂಕೋರ್ಟ್ನಲ್ಲಿ ಹೇಳಿದರೆ ಛೀಮಾರಿ ಹಾಕಿಸಿಕೊಳ್ಳುತ್ತಾರೆ ಎಂದು ಹೇಳಿದರು.