ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ: ವಿದ್ಯಾರ್ಥಿಗಳಿಬ್ಬರು ಮೃತ್ಯು
ಕಾರ್ಕಳ, ನ.3: ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟ ಘಟನೆ ಸಾಣೂರು ಶಾಂಭವಿ ಸೇತುವೆ ಬಳಿ ಕಾರ್ಕಳ-ಬೆಳುವಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನ.3ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ದ್ವಿಚಕ್ರ ವಾಹನ ಬೈಕ್ ಸವಾರ ಮಂಡ್ಯ ಜಿಲ್ಲೆಯ ಸುದೇಶ್ (17) ಹಾಗೂ ಸಹ ಸವಾರ ಸುರತ್ಕಲ್ ನಿವಾಸಿ ರಾಜೇಂದ್ರ(17) ಎಂದು ಗುರು ತಿಸಲಾಗಿದೆ. ಇವರಿಬ್ಬರು ಸುರತ್ಕಲ್ ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿ ಗಳಾಗಿದ್ದರು.
ಕಾರ್ಕಳ ಕಡೆಯಿಂದ ಬೆಳುವಾಯಿ ಕಡೆಗೆ ಹೋಗುತ್ತಿದ್ದ ಇವರ ದ್ವಿಚಕ್ರ ವಾಹನ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸವಾರರಿಬ್ಬರು ರಸ್ತೆ ಬದಿಯ ಸುಮಾರು 40 ಅಡಿ ಕೆಳಕ್ಕೆ ಚರಂಡಿಗೆ ಬಿದ್ದು ಗಂಭೀರವಾಗಿ ಗಾಯ ಗೊಂಡರು.
ಇವರಲ್ಲಿ ಸುದೇಶ್ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟರೆ, ರಾಜೇಂದ್ರ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.