ಪಾನೀರ್: ಕೆಥೊಲಿಕ್ ಸಭಾದಿಂದ ‘ಕ್ರೀಡೋತ್ಸವ-2019’ ಉದ್ಘಾಟನೆ
ಉಳ್ಳಾಲ, ನ.3: ಕೆಥೊಲಿಕ್ ಸಭಾ ಆಯಾ ಚರ್ಚ್ಗಳಿಗೆ ಬಲ ತುಂಬಿದ್ದು, ವಿವಿಧ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ಸಮುದಾಯದ ಅಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪೆರ್ಮನ್ನೂರು ಚರ್ಚ್ನ ಧರ್ಮಗುರು ಫಾ.ಡಾ.ಜೆ.ಬಿ.ಸಲ್ದಾನ ಅಭಿಪ್ರಾಯಪಟ್ಟರು.
ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯ ಯುವ ವರ್ಷಾಚರಣೆ ಪ್ರಯುಕ್ತ ಕೆಥೊಲಿಕ್ ಸಭಾ ಪಾನೀರ್ ಘಟಕದ ವತಿಯಿಂದ ರವಿವಾರ ಪಾನೀರ್ ಚರ್ಚ್ ಮೈದಾನದಲ್ಲಿ ನಡೆದ ಮಂಗಳೂರು ದಕ್ಷಿಣ ವಾಡ್ ಮಟ್ಟದ ‘ಕ್ರೀಡೋತ್ಸವ-2019’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯದಲ್ಲಿ ನಡೆಯುವ ಕಾರ್ಯಕ್ರಮ ಎಲ್ಲೂ ನಡೆಯುವುದಿಲ್ಲ. ಪಾನೀರ್ ಕೆಥೊಲಿಕ್ ಸಭಾ ಮೂವತ್ತು ವರ್ಷದ ಪ್ರಯುಕ್ತ ಮೂವತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತರ ವಾರ್ಡ್ಗಳಿಗೆ ಮಾದರಿಯಾಗಿದ್ದು, ಚರ್ಚ್ಗೂ ಕೀರ್ತಿ ತಂದಂತಾಗಿದೆ ಎಂದು ಹೇಳಿದರು.
ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕರಾಟೆಪಟು ಲೈಝಿಲ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಪಾನೀರ್ ಮೆರ್ಸಿಯಮ್ಮನವರ ಇಗರ್ಜಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಆಲ್ಫ್ರೆಡ್ ಡಿಸೋಜ, ಕೇಂದ್ರೀಯ ಸಮಿತಿ ಸದಸ್ಯರಾದ ಮೆಲ್ವಿನ್ ಸಿ.ಡಿಸೋಜ ಉಪಸ್ಥಿತರಿದ್ದರು.
ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯಾಧ್ಯಕ್ಷ ಫೆಲಿಕ್ಸೃ್ ಡಿಸೋಜ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ಜೋಸ್ಲಿನ್ ಡಿಸೋಜ ವಂದಿಸಿದರು. ಕೋಶಾಧಿಕಾರಿ ಸ್ಟೀವನ್ ವಾಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರ ಹೆಸರು ವಾಚಿಸಿದರು.