ಚಿಕ್ಕಮಗಳೂರು: ರಸ್ತೆಯ ಗುಂಡಿಗೆ ಬೈಕ್ ಬಿದ್ದು ಯುವತಿ ಮೃತ್ಯು
ಚಿಕ್ಕಮಗಳೂರು, ನ.4: ವಿದೇಶದಿಂದ ಉದ್ಯೋಗಾವಕಾಶದ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ವಿದೇಶದಲ್ಲಿ ಉಜ್ವಲ ಬದುಕು ಕಟ್ಟಿಕೊಳ್ಳಲು ಕನಸು ಕಾಣುತ್ತಿದ್ದ ಇಂಜಿನಿಯರ್ ಪದವೀಧರೆಯೊಬ್ಬಳನ್ನು ರಸ್ತೆಯ ಗುಂಡಿಗಳು ಬಲಿ ತೆಗೆದುಕೊಂಡ ಘಟನೆ ನಗರದಲ್ಲಿ ರವಿವಾರ ಸಂಜೆ ವರದಿಯಾಗಿದೆ.
ನಗರದ ನಿವಾಸಿಯಾಗಿರುವ ಸಿಂದೂಜಾ(23) ಎಂಬ ಪ್ರತಿಭಾವಂತ ಯುವತಿ ಇಂಜಿನಿಯರ್ ಪದವಿ ಮುಗಿಸಿ ವಿದೇಶದಲ್ಲಿ ಉದ್ಯೋಗ ಪಡೆದು ಸುಂದರ ಭವಿಷ್ಯ ನಿರ್ಮಿಸಿಕೊಳ್ಳುವ ಕನಸು ಕಂಡಿದ್ದರು. ಈ ನಿಟ್ಟಿನಲ್ಲಿ ಅವರು ವಿದೇಶಕ್ಕೆ ತೆರಳಲು ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ರವಿವಾರ ಸಂಜೆ ವೇಳೆ ನಗರದ ಪೊಲೀಸ್ ಠಾಣೆಯಿಂದ ಪಾಸ್ಪೋರ್ಟ್ ವೆರಿಫಿಕೇಶನ್ಗೆ ಕರೆ ಬಂದಿದ್ದರಿಂದ ಸಿಂದೂಜಾ ಅವರು ತಂದೆ ಕುಮಾರ್ರೊಂದಿಗೆ ಬೈಕ್ನಲ್ಲಿ ನಗರದ ಹೌಸಿಂಗ್ ಬೋರ್ಡ್ ಕಡೆಯಿಂದ ನಗರಠಾಣೆಯತ್ತ ಆಗಮಿಸುತ್ತಿದ್ದರು. ತಂದೆ-ಮಗಳಿದ್ದ ಬೈಕ್ ನಗರದ ದಂಟರಮಕ್ಕಿ ಬಡಾವಣೆ ಸಮೀಪದಲ್ಲಿರುವ ಕಡೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ರಸ್ತೆಯುದ್ದಕ್ಕೂ ಇದ್ದ ಗುಂಡಿಯೊಂದರಲ್ಲಿ ಸಿಲುಕಿ ನೆಲಕ್ಕುರುಳಿದೆ. ಈ ವೇಳೆ ಬೈಕ್ನಿಂದ ನೆಲಕ್ಕೆ ಅಪ್ಪಳಿಸಿದ ಸಿಂದೂಜಾ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಸಿಂದೂಜಾ ಅವರನ್ನು ಕೂಡಲೇ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರಾದರೂ ಮಗಳ ಸಾವಿಗೆ ತಂದೆಯ ಅಜಾಗರೂಕತೆಯೇ ಕಾರಣ ಎಂದು ಆರೋಪಿಸಿ ಸಿಂದೂಜಾ ತಂದೆ ಕುಮಾರ್ ಅವರ ಮೇಲೆಯೇ ದೂರು ದಾಖಲಿಸಿದ್ದು, ಪೊಲೀಸರ ಈ ಕ್ರಮದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕಮಗಳೂರು ನಗರದ ಎಲ್ಲ ರಸ್ತೆಗಳು ಸಿಟಿ ರವಿ ಅವರ ಹಿಂಬಾಲಕರೇ ಗುತ್ತಿಗೆ ಪಡೆದು ನಿರ್ವಹಿಸಿದ್ದು, ಎಲ್ಲ ರಸ್ತೆ ಕಾಮಗಾರಿಗಳೂ ಕಳಪೆಯಾಗಿವೆ. ಕಳಪೆ ಕಾಮಗಾರಿಯಿಂದಾಗಿ ನಗರದ ಎಲ್ಲ ರಸ್ತೆಗಳೂ ವರ್ಷ ತುಂಬುವುದರೊಳಗಾಗಿ ಗುಂಡಿಬಿದ್ದು, ಸಾರ್ವಜನಿಕರ ಪ್ರಾಣ ತೆಗೆಯುತ್ತಿವೆ. ಇಂತಹ ಕಳಪೆ ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರು, ಇಂಜಿನಿಯರ್ ಹಾಗೂ ಶಾಸಕರ ವಿರುದ್ಧ ಕ್ರಮ ವಹಿಸಬೇಕು. ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಮೃತ ಯುವತಿಯ ತಂದೆಯ ಮೇಲೆ ದೂರು ದಾಖಲಿಸುವ ಮೂಲಕ ಪೊಲೀಸರು ಅಮಾನವೀಯತೆಯನ್ನು ಪ್ರದರ್ಶಿಸಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.