ಅವೈಜ್ಞಾನಿಕ ಮೀನುಗಾರಿಕೆ ನಡೆಸುವ ಬೋಟುಗಳ ವಿರುದ್ಧ ಕ್ರಮ
ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ

ಉಡುಪಿ, ನ.4: ಅವೈಜ್ಞಾನಿಕ ಮೀನುಗಾರಿಕೆ ನಡೆಸುವ ಬುಲ್ಟ್ರಾಲ್ ಬೋಟುಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗುತ್ತಿದ್ದು, ಈಗಾಗಲೇ ನಾಲ್ಕು ಬೋಟುಗಳಿಗೆ ಡಿಸೇಲ್ ವಿತರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಮಲ್ಪೆ ಬಂದರಿನಲ್ಲಿ ಪ್ರತಿದಿನ ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯ ಯಾವುದೇ ಅವೈಜ್ಞಾನಿಕ ಮೀನುಗಾರಿಕೆ ನಡೆಯುತ್ತಿಲ್ಲ ಎಂದು ಮಲ್ಪೆ ಮೀನುಗಾರಿಕಾ ಇಲಾಖೆಯ ಸಾಯಕ ನಿರ್ದೇಶಕ ಕಿರಣ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಕಚೇರಿಯಲ್ಲಿಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.
ಉಡುಪಿ, ಬ್ರಹ್ಮಾವರ, ಕಾಪು ತಾಲೂಕು ವ್ಯಾಪ್ತಿಯಲ್ಲಿ 2018ರಲ್ಲಿ ದೋಣಿ ಇಂಜಿನ್ ಖರೀದಿ ಮಾಡಿದ 40 ಮಂದಿಗೆ ಮೀನುಗಾರಿಕೆ ಸಬ್ಸಿಡಿ ವಿತರಣೆ ಮಾಡಲಾಗಿದ್ದು, ಈ ಸಂಬಂಧ 163 ಮಂದಿಗೆ ಸಬ್ಸಿಡಿ ಬಿಡುಗಡೆಯಾಗಲು ಬಾಕಿ ಇದೆ. 2017ರಲ್ಲಿ ಇಂಜಿನ್ ಖರೀದಿಸಿದವರಿಗೆ ಸಬ್ಸಿಡಿ ಬಿಡುಗಡೆ ಮಾಡುವಂತೆ ಸರಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪ್ರಮೋದ್ ಮಧ್ವರಾಜ್ ಮೀನುಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಮೀನುಗಾರಿಕಾ ಬೋಟುಗಳಿಗೆ ವಿತರಣೆ ಮಾಡಲಾಗುತ್ತಿದ್ದ ಸಾಧ್ಯತಾ ಪತ್ರ ವನ್ನು 2016ರಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಕಳೆದ ಮೂರು ವರ್ಷ ಗಳಿಂದ ಹಲವು ಬೋಟುಗಳಿಗೆ ಪರವಾನಿಗೆ ಸಿಗದೆ ತೊಂದರೆಯಾಗುತ್ತಿದೆ. ಆದುದರಿಂದ ಅಧಿಕಾರಿಗಳು ಶಾಸಕರ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕು ಎಂದು ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ ಒತ್ತಾಯಿಸಿರು.
ಮೀನುಗಾರಿಕಾ ಇಲಾಖೆಯಿಂದ ಅನುಮೋದನೆಗೊಳ್ಳುತ್ತಿದ್ದ ಮತ್ಸಾಶ್ರಯ ಮನೆಗಳನ್ನು ಇದೀಗ ರಾಜೀವ ಗಾಂಧಿ ವಸತಿ ನಿಗಮಕ್ಕೆ ವಹಿಸಿಕೊಡಲಾಗಿದೆ. ಇದರಿಂದ ಅನೇಕ ಸಮಸ್ಯೆಗಳಾಗುತ್ತಿದೆ. ಆದುದರಿಂದ ಇದರ ಸಾಧಕ ಬಾಧಕದ ಕುರಿತು ಅಧ್ಯಯನ ಮಾಡಿ ವರದಿ ತಯಾರಿಸಿ ಮೀನುಗಾರಿಕಾ ಸಚಿವರಿಗೆ ಸಲ್ಲಿಸಬೇಕು ಎಂದು ಲಾಲಾಜಿ ಆರ್.ಮೆಂಡನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರಕಾರಿ ಜಾಗ ವಾಪಾಸ್ಸು ಕೊಡಲಿ: ಕಾಪು ತಾಲೂಕಿನಲ್ಲಿ ಸರಕಾರಿ ನಿವೇಶನದ ಕೊರತೆ ಇದ್ದು, ಪಡುಬಿದ್ರೆಯ ಸುಝ್ಲೆನ್ ಕಂಪೆನಿಗೆ ನೀಡಿದ 600 ಎಕರೆ ಜಾಗದ ಪೈಕಿ 300 ಎಕರೆ ಸರಕಾರಿ ಭೂಮಿಯನ್ನು ವಾಪಾಸ್ಸು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಒತ್ತಾಯ ಮಾಡಲಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನಲ್ಲಿರುವ ನಿವೇಶನದ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಲಾಲಾಜಿ ಮೆಂಡನ್ ತಿಳಿಸಿದರು.
ಜಿಪಂ ಸದಸ್ಯೆ ಚಂದ್ರಿಕಾ ಕೇಲ್ಕರ್ ಮಾತನಾಡಿ, ಹಿರಿಯಡ್ಕದಲ್ಲಿರುವ ಏಕೈಕ ಮೈದಾನವನ್ನು ಮರಳು ದಾಸ್ತಾನು ಇಡಲು ಬಳಕೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಈ ಕ್ರಮಕ್ಕೆ ವಿರೋಧಗಳು ಕೇಳಿ ಬರುತ್ತಿವೆ. ಆದುದರಿಂದ ಇದನ್ನು ಬೇರೆ ಸರಕಾರಿ ಜಾಗಕ್ಕೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಲಾಲಾಜಿ ಆರ್.ಮೆಂಡನ್, ಈಗಾಗಲೇ ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಹೂಳು ತುಂಬಿದ ಬಜೆ ನದಿಯಿಂದ ತೆರವುಗೊಳಿಸಲಾದ ಮರಳನ್ನು ಈ ಮೈದಾನದಲ್ಲಿ ದಾಸ್ತಾನು ಇಡಲಾಗುತ್ತಿದೆ. ಅದಕ್ಕಾಗಿ ಈ ಮೈದಾನವನ್ನು ಡಿ.31ರವರೆಗೆ ಬಳಸಲಾಗು ತ್ತದೆ. ನಂತರ ಈ ಮೈದಾನವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿ, ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಅರ್ಧದಲ್ಲಿ ಸ್ಥಗಿತಗೊಂಡಿದ್ದ ಸಾವಯವ ಸಂತೆಯ ಬಗ್ಗೆ ಸಾವಯವ ಸಂತೆ ಸಮಿತಿ ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮತ್ತೆ ಪುನಾರಂಭಿಸ ಲಾಗಿದೆ. ಇದೀಗ ಪ್ರತಿ ರವಿವಾರ ಸಾವಯವ ಸಂತೆ ನಡೆಯುತ್ತಿದೆ ಎಂದು ತೋಟಗಾರಿಕಾ ಸಹಾಯಕಿ ದೀಪಾ ಸಭೆಗೆ ತಿಳಿಸಿದು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಮೊದಲಾದ ವರು ಉಪಸ್ಥಿತರಿದ್ದರು.
ಪಶುಸಂಗೋಪನಾ ಇಲಾಖೆಯಲ್ಲಿ 71 ಹುದ್ದೆಗಳು ಖಾಲಿ !
ಪಶುಸಂಗೋಪನಾ ಇಲಾಖೆಯ ಉಡುಪಿ, ಕಾಪು, ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 132 ಹುದ್ದೆಗಳ ಪೈಕಿ 71 ಹುದ್ದೆಗಳು ಖಾಲಿ ಇದ್ದು, ಕೇವಲ 61 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಇಲಾಖೆಯ ಉಡುಪಿ ತಾಲೂಕು ಪ್ರಭಾರ ಸಹಾಯಕ ನಿರ್ದೇಶಕ ಡಾ.ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಈ 61 ಮಂದಿಯಲ್ಲಿ 32 ಮಂದಿ ಖಾಯಂ ಹಾಗೂ 23 ಮಂದಿ ಗುತ್ತಿಗೆ ಆಧಾರಿತ ಸಿಬ್ಬಂದಿಯಾಗಿದ್ದಾರೆ. ಇಲಾಖೆಯಲ್ಲಿರುವ ಒಟ್ಟು 56 ಡಿ ಗ್ರೂಪ್ ಹುದ್ದೆಗಳಲ್ಲಿ ಮೂವರು ಮಾತ್ರ ಖಾಯಂ ನೌಕರರಾಗಿದ್ದಾರೆ. ಉಳಿದ 53 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಗುತ್ತಿಗೆ ಆಧಾರಿತ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಕಳೆದ ಐದು ವರ್ಷಗಳಿಂದ ಪಶು ವೈದ್ಯಾಧಿಕಾರಿಗಳ ಹೊರತು ಉಳಿದ ಯಾವುದೇ ಹುದ್ದೆಗಳಿಗೆ ಹೊಸ ನೇಮಕಾತಿ ಆಗುತ್ತಿಲ್ಲ ಎಂದರು.
ಕಾಪು ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಅಂಕಿ ಅಂಶ ತಯಾರಿಸಿ ವರದಿ ಸಲ್ಲಿಸುವಂತೆ ಶಾಸಕ ಲಾಲಾಜಿ ಆರ್.ಮೆಂಡನ್ ಅಧಿಕಾರಿಗೆ ಸೂಚಿಸಿ ದರು. ಈಗಾಗಲೇ ಪ್ರತಿವರ್ಷ ಖಾಲಿ ಹುದ್ದೆಗಳ ಬಗ್ಗೆ ಸರಕಾರ ಪ್ರಸ್ತಾವ ಸಲ್ಲಿಸಲಾಗುತ್ತಿದ್ದು, ಕಾಪು ತಾಲೂಕಿನ ಖಾಲಿ ಹುದ್ದೆಗಳ ಬಗ್ಗೆ ವರದಿಯನ್ನು ತಯಾರಿಸಲಾಗುವುದು ಎಂದು ಡಾ.ಗೋಪಾಲಕೃಷ್ಣ ಭಟ್ ತಿಳಿಸಿದರು.







