ದೇಸಿ ಹಸುವಿನ ಹಾಲಿನಲ್ಲಿ ಚಿನ್ನ ಇದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ!
ಬುದ್ಧಿಜೀವಿಗಳು ನಾಯಿ ಮಾಂಸವನ್ನೂ ತಿನ್ನಬೇಕು ಎಂದ ದಿಲೀಪ್ ಘೋಷ್
ಕೊಲ್ಕತ್ತಾ, ನ.5: "ಗೋಮಾಂಸ ತಿನ್ನುವ ಬುದ್ಧಿಜೀವಿಗಳು ನಾಯಿಯ ಮಾಂಸವನ್ನೂ ತಿನ್ನಬೇಕು'' ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಬುರ್ದ್ವಾನ್ ನಗರದಲ್ಲಿ ಗೋಪ ಅಷ್ಟಮಿ ಕಾರ್ಯಕ್ರಮದ ಸಂದರ್ಭ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಘೋಷ್, ಬುದ್ಧಿಜೀವಿಗಳ ವಿರುದ್ಧ ಕಿಡಿ ಕಾರುತ್ತಾ, "ಕೆಲ ಬುದ್ಧಿಜೀವಿಗಳು ರಸ್ತೆಗಳಲ್ಲಿ ಗೋಮಾಂಸ ತಿನ್ನುತ್ತಾರೆ, ಕೇವಲ ದನದ ಮಾಂಸವೇಕೆ, ನಾಯಿಯ ಮಾಂಸವನ್ನೂ ತಿನ್ನಿ ಎಂದು ಅವರಿಗೆ ಹೇಳಬಯಸುತ್ತೇನೆ. ಯಾವ ಪ್ರಾಣಿಯನ್ನು ತಿಂದರೂ ಅವರ ಆರೋಗ್ಯ ಚೆನ್ನಾಗಿರುತ್ತದೆ. ರಸ್ತೆಗಳಲ್ಲಿ ಮಾತ್ರವೇಕೆ? ನಿಮ್ಮ ಮನೆಗಳಲ್ಲೂ ತಿನ್ನಿ'' ಎಂದು ಹೇಳಿದರು.
ಭಾರತದಲ್ಲಿನ ಹಸುವಿನ ಹಾಲಿನಲ್ಲಿ ಬಂಗಾರವಿದೆ. ಆದ್ದರಿಂದ ಅದು ಹಳದಿ ಬಣ್ಣದ ಮಿಶ್ರಣದಂತಿದೆ ಎಂದು ಅವರು ಹೇಳಿದರು. "ಗೋವು ನಮ್ಮ ತಾಯಿ, ದನದ ಹಾಲು ಕುಡಿದು ನಾವು ಬದುಕುತ್ತೇವೆ. ಯಾರಾದರೂ ನಮ್ಮ ತಾಯಿಯ ಜತೆ ಅನುಚಿತವಾಗಿ ವರ್ತಿಸಿದರೆ, ಅವರ ಜತೆ ಹೇಗೆ ವರ್ತಿಸಬೇಕೋ ಹಾಗೆ ವರ್ತಿಸುತ್ತೇನೆ. ಭಾರತದ ಪವಿತ್ರ ಭೂಮಿಯಲ್ಲಿ ದನಗಳನ್ನು ಕೊಂದು ಗೋಮಾಂಸ ಸೇವಿಸುವುದು ಮಹಾ ಅಪರಾಧ'' ಎಂದು ಹೇಳಿದ ಅವರು ``ರಸ್ತೆಗಳಲ್ಲಿ ಗೋಮಾಂಸ ತಿನ್ನುವ ಬುದ್ಧಿಜೀವಿಗಳು ತಮ್ಮ ವಿದೇಶಿ ನಾಯಿಗಳ ಮಲ ತೆಗೆಯುವುದರಲ್ಲಿ ಹೆಮ್ಮೆ ಪಡುತ್ತಾರೆ'' ಎಂದರು.
ದೇಸಿ ಹಾಗೂ ವಿದೇಶೀ ದನಗಳ ಕುರಿತಂತೆಯೂ ಮಾತನಾಡಿದ ಅವರು ಕೇವಲ ದೇಸಿ ದನಗಳು ನಮ್ಮ ತಾಯಿ, ವಿದೇಶಿ ದನಗಳಲ್ಲ ಎಂದರು.