ದಿಲ್ಲಿಯಲ್ಲಿ ಬೀದಿಗಿಳಿದ ಪೊಲೀಸರು: ಭಾರೀ ಪ್ರತಿಭಟನೆ
ಕರ್ತವ್ಯಕ್ಕೆ ವಾಪಸಾಗಲು ಪೊಲೀಸ್ ಆಯುಕ್ತರ ಮನವಿ
ಹೊಸದಿಲ್ಲಿ, ನ.5: ಪ್ರತಿಭಟನೆನಿರತ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಮರಳುವಂತೆ ದಿಲ್ಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಮಂಗಳವಾರ ಒತ್ತಾಯಿಸಿದ್ದಾರೆ ಮತ್ತು ಅವರು "ಶಿಸ್ತುಬದ್ಧ ಶಕ್ತಿಯಂತೆ" ವರ್ತಿಸಬೇಕು ಎಂದು ಹೇಳಿದ್ದಾರೆ
ಪೊಲೀಸ್ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪಟ್ನಾಯಕ್ ಮಾತನಾಡಿದರು.
ಸೋಮವಾರ ಸಾಕೇತ್ ನ್ಯಾಯಾಲಯದ ಹೊರಗೆ ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣವನ್ನು ಖಂಡಿಸಿ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದಾರೆ.
"ನಾವು ಶಿಸ್ತುಬದ್ಧ ಶಕ್ತಿಯಂತೆ ವರ್ತಿಸಬೇಕು. ನಾವು ಕಾನೂನನ್ನು ಎತ್ತಿ ಹಿಡಿಯಬೇಕೆಂದು ಸರ್ಕಾರ ಮತ್ತು ಜನರು ಬಯಸುತ್ತಾರೆ, ಇದು ನಮ್ಮ ದೊಡ್ಡ ಜವಾಬ್ದಾರಿ. ಕರ್ತವ್ಯವನ್ನು ಪುನರಾರಂಭಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ" ಎಂದು ಪಟ್ನಾಯಕ್ ಪೊಲೀಸ್ ಸಿಬ್ಬಂದಿಗೆ ತಿಳಿಸಿದರು, ಪೊಲೀಸರ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ನ. 2 ರಂದು ತೀಸ್ ಹಜಾರಿ ನ್ಯಾಯಾಲಯದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ ನಡೆದ ಘರ್ಷಣೆಯ ವಿರುದ್ಧ ಪೊಲೀಸರು ಮಂಗಳವಾರ ಪೊಲೀಸ್ ಹೆಡ್ ಕ್ವಾರ್ಟರ್ಸ್ (ಪಿಎಚ್ಕ್ಯು) ಹೊರಗೆ ಪ್ರತಿಭಟನೆ ನಡೆಸಿದರು.
"ಪೋಲಿಸ್ ಮತ್ತು ವಕೀಲರ ನಡುವೆ ಸಂಭವಿಸಿದ ಘರ್ಷಣೆ ದುರದೃಷ್ಟಕರ. ಎಲ್ಲರೂ ಸಾರ್ವಜನಿಕ ವಲಯದಲ್ಲಿನ ವಿಷಯಗಳ ಆಧಾರದ ಮೇಲೆ ಸಮತೋಲಿತ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು.ದೈಹಿಕ ಹಲ್ಲೆ ಮತ್ತು ಅವಮಾನಕ್ಕೆ ಒಳಗಾದ ಆ ಪೊಲೀಸ್ ಸಿಬ್ಬಂದಿ ಪರವಾಗಿ ದೇಶಾದ್ಯಂತ ಪೊಲೀಸರು ಒಗ್ಗಟ್ಟಿನಲ್ಲಿ ನಿಲ್ಲುತ್ತಾರೆ "ಎಂದರು.
ಜಿಲ್ಲಾ ನ್ಯಾಯಾಲಯಗಳ ಎಲ್ಲಾ ಬಾರ್ ಅಸೋಸಿಯೇಷನ್ಗಳ ಸಮನ್ವಯ ಸಮಿತಿಯ ಅಧ್ಯಕ್ಷರಾದ ಮಹಾವೀರ್ ಶರ್ಮಾ ಅವರು ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರು ಅನಿರ್ದಿಷ್ಟವಾಗಿ ಕೆಲಸದಿಂದ ದೂರವಿರುತ್ತಾರೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಕಾನೂನು ಭ್ರಾತೃತ್ವದ ಸದಸ್ಯರಿಗೆ ನ್ಯಾಯಾಲಯಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಮಂಗಳವಾರದಿಂದ ತಮ್ಮ ನ್ಯಾಯಾಲಯದ ಕೆಲಸವನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದೆ.
ತೀಸ್ ಹಜಾರಿಯಲ್ಲಿ ನಡೆದ ಘಟನೆಯನ್ನು ಖಂಡಿಸಿ ವಕೀಲರು ನಗರದಾದ್ಯಂತ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ವಕೀಲರ ಗುಂಪೊಂದು ಸೋಮವಾರ ಸುಪ್ರೀಂ ಕೋರ್ಟ್ನ ಹೊರಗೆ ಪ್ರತಿಭಟನೆ ನಡೆಸಿತು.
ಘಟನೆಗೆ ಸಂಬಂಧಿಸಿ ಶನಿವಾರ ಸಹಾಯಕ ಸಬ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸಲಾಗಿದೆ ಮತ್ತು ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ.
ಘಟನೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು (ಉತ್ತರ), ಇಬ್ಬರು ಸ್ಟೇಷನ್ ಹೌಸ್ ಅಧಿಕಾರಿಗಳು (ಎಸ್ಎಚ್ಒ) ಮತ್ತು ಎಂಟು ವಕೀಲರು ಸೇರಿದಂತೆ ಒಟ್ಟು 20 ಮಂದಿ ಗಾಯಗೊಂಡಿದ್ದಾರೆ.
ಮತ್ತೊಂದೆಡೆ ಕೇಂದ್ರ ಗೃಹ ಸಚಿವಾಲಯವು ಘರ್ಷಣೆ ಕುರಿತು ದಿಲ್ಲಿ ಪೊಲೀಸರಿಂದ ವರದಿ ಸ್ವೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ವಾಸ್ತವಿಕ ವರದಿಯಾಗಿದ್ದು, ಶನಿವಾರದ ಘಟನೆಗೆ ಕಾರಣವಾದ ಸನ್ನಿವೇಶಗಳು ಮತ್ತು ಅದರ ನಂತರ ಕೈಗೊಂಡ ಕ್ರಮಗಳ ವಿವರಗಳನ್ನು ದಿಲ್ಲಿ ಪೊಲೀಸರು ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.