ಪಚ್ಚನಾಡಿ ದುರಂತಕ್ಕೆ ಕಾಂಗ್ರೆಸ್ ಕಾರಣ: ಶಾಸಕ ಭರತ್ ಶೆಟ್ಟಿ
ಮಂಗಳೂರು, ನ.5: ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ ಅನುದಾನವನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ಬೇರೆ ಉದ್ದೇಶಕ್ಕೆ ಉಪಯೋಗಿಸಿದ್ದರಿಂದ ಪಚ್ಚನಾಡಿ ತ್ಯಾಜ್ಯ ಮಂದಾರ ಪ್ರದೇಶದ ದುರಂತಕ್ಕೆ ಕಾರಣ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು 13ನೇ ಹಣಕಾಸು ಯೋಜನೆಯಡಿ ಡಂಪಿಂಗ್ ಯಾರ್ಡ್ಗೆ ಹಣ ಬಿಡುಗಡೆ ಮಾಡಿತ್ತು. ವೋಟ್ಬ್ಯಾಂಕ್ ಉದ್ದೇಶದಿಂದ ಡಂಪಿಂಗ್ ಯಾರ್ಡ್ ಅಭಿವೃದ್ಧಿಯ ಹಣವನ್ನು ಬೇರೆದ್ದಕ್ಕೆ ಬಳಸಿರುವುದು ತಪ್ಪು ಎಂದರು.
ಡಂಪಿಂಗ್ ಯಾರ್ಡ್ನಲ್ಲಿ ತುಂಬ ಸಮಸ್ಯೆಗಳಿವೆ. ತಡೆಗೋಡೆ ಕಟ್ಟುವ ಅಗತ್ಯವಿದೆ. ಭವಿಷ್ಯದಲ್ಲಿ ಘೋರ ದುರಂತ ಸಂಭವಿಸಲಿದೆ ಎಂದು ಪಾಲಿಕೆಯ ಆರೋಗ್ಯ ವಿಭಾಗ ವರದಿ ನೀಡಿದೆ. ಅದನ್ನು ಕಡೆಗಣಿಸಿದ ಪಾಲಿಕೆ ಹಾಗೂ ಕಾಂಗ್ರೆಸ್ ಸರಕಾರ ಅಲ್ಲಿನ ಪರಿಸ್ಥಿತಿಗೆ ಕಾರಣವಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಹಿಂದೆ ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ನವರು ಕೊಟ್ಟ ಮೊದಲ ಹಂತದ ಸಾಲದಲ್ಲಿ ಮುಂದಿನ 20 ವರ್ಷಗಳ ಕಾಲ ಡಂಪಿಂಗ್ ಯಾರ್ಡ್ ಅಭಿವೃದ್ಧಿಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ನಿರೀಕ್ಷೆಗಿಂತ ಹೆಚ್ಚು ತ್ಯಾಜ್ಯ ಅಲ್ಲಿಗೆ ಬಂದು ಡಂಪ್ ಆಗುತ್ತಿತ್ತು. ಹೀಗಾಗಿ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ ಎಂದರು.
ಮಂಗಳೂರು ನಗರದಿಂದ ಪಚ್ಚನಾಡಿಗೆ ಪ್ರತಿದಿನ 400 ಟನ್ ತ್ಯಾಜ್ಯ ಬಂದು ಬೀಳುತ್ತಿದೆ. ಘಟಕದಲ್ಲಿನ ಯಂತ್ರಗಳು ದುರಸ್ತಿಯಲ್ಲಿರುವು ದರಿಂದ ಪ್ರತಿದಿನ ಕೇವಲ 150 ಟನ್ ತ್ಯಾಜ್ಯ ಗೊಬ್ಬರವಾಗುತ್ತಿದೆ. ಇದರ ಹೊರತಾಗಿಯೂ ಡಂಪಿಂಗ್ ಯಾರ್ಡ್ನಲ್ಲಿ 250 ಟನ್ ತ್ಯಾಜ್ಯ ಉಳಿದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಕಳೆದ ಬಾರಿ ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ಪಕ್ಷವು ಆ್ಯಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ಗೆ ಪಾಲಿಕೆಯ ತ್ಯಾಜ್ಯ ಸಂಗ್ರಹದ ಗುತ್ತಿಗೆ ನೀಡಿದ್ದು ಪಾಲಿಕೆ ಮತ್ತು ಗುತ್ತಿಗೆದಾರರು ಮಾಡಿದ ಷರತ್ತುಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಪಚ್ಚನಾಡಿ ಬಗ್ಗೆ ಯಾವುದೇ ಜನಪ್ರತಿನಿಧಿಗಳು, ಪಾಲಿಕೆಯ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ರಣದೀಪ್ ಕಾಂಚನ್, ವಿಠಲ್ ಸಾಲಿಯಾನ್, ವಸಂತ ಹೊಸಬೆಟ್ಟು ಉಪಸ್ಥಿತರಿದ್ದರು.
‘ಅಮೃತ ಯೋಜನೆಯಡಿ ಒಳಚರಂಡಿ ಕಾಮಗಾರಿ’
ಮಂಗಳೂರು ನಗರ ಉತ್ತರದಲ್ಲಿ ನಡೆದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿತ್ತು. ಯುಜಿಡಿ ಸಂಪೂರ್ಣ ವಿಫಲಗೊಂಡಿರುವುದಾಗಿ ಅಂದಿನ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರೇ ಒಪ್ಪಿಕೊಂಡಿದ್ದರು. ತನಿಖೆಗೂ ಅವರೇ ಆದೇಶಿಸಿದ್ದರು. ಮಂಗಳೂರು ನಗರದಲ್ಲಿ ಎರಡು ಗಂಟೆ ಜೋರು ಮಳೆ ಬಂದರೆ ಮ್ಯಾನ್ಹೋಲ್ಗಳಲ್ಲಿರುವ ತ್ಯಾಜ್ಯ ಹೊರ ಬರುತ್ತದೆ. ಪೈಪುಗಳ ಮಿಸ್ ಲಿಂಕಿಂಗ್ ಇದಕ್ಕೆ ಕಾರಣ. ಈಗ ಆ ಕಾಮಗಾರಿಗಳನ್ನು ಕೇಂದ್ರ ಸರಕಾರದ ಅಮೃತ ಯೋಜನೆಯಲ್ಲಿ ಸರಿಪಡಿಸಲಾಗುತ್ತಿದೆ. ಇದರಲ್ಲಿ 65 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಮಾಹಿತಿ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಹೈಕೋರ್ಟ್ನ ಆದೇಶದಂತೆ ಪ್ರತಿ ವಾರ್ಡ್ನಲ್ಲೂ ಸಮಿತಿ ರಚಿಸಲಾಗುವುದು. ಪಾರದರ್ಶಕ ಆಡಳಿತ ನೀಡಲಿದ್ದೇವೆ.
- ಡಾ.ವೈ.ಭರತ್ ಶೆಟ್ಟಿ,
ಮಂಗಳೂರು ನಗರ ಉತ್ತರ ಶಾಸಕ