ಸೂರ್ಯನ ಅಧ್ಯಯನಕ್ಕೆ ಇಸ್ರೋದ ಆದಿತ್ಯ ಸಿದ್ಧತೆ: ಎ.ಎಸ್. ಕಿರಣ್ ಕುಮಾರ್
ಮಂಗಳೂರು, ನ.6: ಸೂರ್ಯ-ಭೂಮಿಯ ವ್ಯವಸ್ಥೆಯ ಸುತ್ತ ಅಧ್ಯಯನಕ್ಕಾಗಿ ಆದಿತ್ಯ ಎಂಬ ಉಪಗ್ರಹವನ್ನು ಉಡಾಯಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವತಿಯಿಂದ ಇನ್ಫೋವಿಷನ್ ಟೆಕ್ನಾಲಜೀಸ್ ಮುಂಬೈ ಮತ್ತು ಇವಾನ್ಸ್ ಆ್ಯಂಡ್ ಸದರ್ಲ್ಯಾಂಡ್ ಯುಎಸ್ಎ ಸಹಯೋಗದಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಬುಧವಾರ ‘ಪಿಲಿಕುಳ ಮೊದಲ ಅಂತಾರಾಷ್ಟ್ರೀಯ ಚಿತ್ರೋತ್ಸವ ಮತ್ತು ತಾರಾಲಯ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
ಆದಿತ್ಯ ಉಪಗ್ರಹ ಸೂರ್ಯನನ್ನು ನಿರಂತರ ವೀಕ್ಷಣೆ ಮಾಡುವುದಲ್ಲದೆ, ಹೆಚ್ಚುವರಿ ಪ್ರಯೋಗಗಳೊಂದಿಗೆ ಸೂರ್ಯನ ವರ್ಣತಂತು, ದ್ಯುತಿಗೋಳ ಮೊದಲಾದ ಪ್ರಕ್ರಿಯೆಗಳನ್ನು ಅವಲೋಕಿಸಲಿದೆ ಎಂದವರು ಹೇಳಿದರು.
ಚಂದ್ರಯಾನ 2 ಕೊನೆಯ ಹಂತದಲ್ಲಿ ಗುರಿ ತಲುಪಲು ಸಾಧ್ಯವಾಗದಿರುವುದು ಇಸ್ರೋದ ಮುಂದಿನ ಯೋಜನೆಗಳಿಗೆ ಪಾಠವಾಗಲಿದೆ. ಇಸ್ರೋದ ಆಸ್ಟ್ರೋಸ್ಯಾಟ್ ಉಪಗ್ರಹ ಖಗೋಳವಸ್ತುಗಳನ್ನು ಏಕಕಾಲದಲ್ಲಿ ಅಧ್ಯಯನ ನಡೆಸಲು ಪೂರಕವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಉಪಗ್ರಹ ಖಗೋಳ ಅಧ್ಯಯನ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಸಹಾಯಕವಾಗಿದೆ. ಚಂದ್ರಯಾನ 1 ಯೋಜನೆ ಚಂದ್ರನ ಮೇಲೆ ನೀರಿನ ಅಂಶವಿದೆ ಎಂಬುದನ್ನು ತಿಳಿಸಿಕೊಟ್ಟಿತು. ಮಂಗಳಯಾನ ಯೋಜನೆ ದೇಶದ ಸಾಮರ್ಥ್ಯವನ್ನು ಜಗತ್ತಿಗೆ ತೋರ್ಪಡಿಸಿದೆ ಎಂದವರು ಹೇಳಿದರು.
ಚಂದ್ರಯಾನ 2 ಉಪಗ್ರಹ ಕೊನೆಯ ಹಂತದಲ್ಲಿ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಮೊದಲ 12 ನಿಮಿಷ ನಾವು ಅಂದುಕೊಂಡಂತೆ ನಡೆಯಿತು. ಆದರೆ, 3.8 ಲಕ್ಷ ಕಿಮೀ ದೂರದಲ್ಲಿ ಇರುವ ಉಪಕರಣವನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. ಭವಿಷ್ಯದಲ್ಲಿ ಈ ವಿಚಾರ ಉತ್ತಮ ಪಾಠವಾಗಲಿದೆ. ಪ್ರಸ್ತುತ ಸೌರ ಕರೋನಾ ಅಧ್ಯಯನ ಮಾಡಲು ಆದಿತ್ಯ ಹೆಸರಿನ ಬಾಹ್ಯಾಕಾಶ ನೌಕೆಯನ್ನು ಸಿದ್ದಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇಸ್ರೋ ಖಗೋಳವಿಜ್ಞಾನದ ಬಗ್ಗೆ ಸಂಶೋಧನೆ ನಡೆಸುವ ಜತೆಗೆ ಇತರ ಸಂಶೋಧನೆಗಳನ್ನೂ ನಡೆಸುತ್ತಿದೆ. ನಾವಿಕ್ ಯೋಜನೆ ಮೂಲಕ ಮೀನುಗಾರರಿಗೆ ಮೀನು ದೊರೆಯುವ ಸ್ಥಳ, ಹವಾಮಾನದ ಬಗ್ಗೆ ಮಾಹಿತಿ ದೊರೆಯುತ್ತಿದೆ. ವಾಯುಗುಣ, ಹಮಾಮಾನ ವೈಪರೀತ್ಯ ಮುಂತಾದ ವಿಷಯಗಳಲ್ಲಿ ಹವಾಮಾನ ಇಲಾಖೆಗೂ ಸಹಾಯಕವಾಗಿದೆ ಎಂದರು.
ಇಸ್ರೋದ ಮೂಲಕ ಬಾಹ್ಯಾಕಾಶ ಅಧ್ಯಯನ, ತಂತ್ರಜ್ಞಾನವು ಜನಸಾಮಾನ್ಯರಿಗೂ ಸಾಕಷ್ಟು ರೀತಿಯಲ್ಲಿ ನೆರವಾಗುತ್ತಿದೆ. ಪ್ರವಾಸೋದ್ಯಮ, ಬಾಹ್ಯಾಕಾಶ ಸಾಹಸ, ಬಾಹ್ಯಾಕಾಶದ ಮೇಲಾಗುತ್ತಿರುವ ದುಷ್ಪರಿಣಾಮ, ಬಾಹ್ಯಾಕಾಶ ಗಣಿಗಾರಿಕೆ ಮೊದಲಾದವುಗಳ ಬಗ್ಗೆ ಉತ್ತೇಜ ಹಾಗೂ ನಿಗಾ ವಹಿಸಲು ಸಾಧ್ಯವಾಗಿದೆ.
ಇಸ್ರೋ ಸಂಸ್ಥಾಪಕ ವಿಕ್ರಮ್ ಸರಬಾಯ್ ಅವರ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಅವರು ನೀಡಿದ ಕೊಡುಗೆಗಳನ್ನು ನೆನಪಿಸಿಕೊಂಡ ಅವರು, ಸರಬಾಯಿ ಭಾರತವು ಜಾಗತಿಕವಾಗಿ ಗುರುತಿಸಿಕೊಳ್ಳುವಲ್ಲಿ ಕಾರಣಕರ್ತರಾಗಿದ್ದಾರೆ ಎಂದರು.