ಉಡುಪಿ: ವೈದ್ಯರ ಹೊರರೋಗಿಗಳ ಸೇವೆ ಬಂದ್
ಉಡುಪಿ, ನ.7: ಬೆಂಗಳೂರಿನಲ್ಲಿ ಇತ್ತೀಚೆಗೆ ಕರ್ತವ್ಯ ನಿರತ ಮಹಿಳಾ ವೈದ್ಯ ವಿದ್ಯಾರ್ಥಿ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ನಿರ್ದೇಶನದಂತೆ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ವೈದ್ಯರುಗಳು ನ.8ರ ಬೆಳಗಿನ ಜಾವ ಆರು ಗಂಟೆಯಿಂದ ನ.9ರ ಬೆಳಗಿನ ಜಾವ ಆರು ಗಂಟೆಯವರೆಗೆ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 240 ವೈದ್ಯರುಗಳಿದ್ದು, ಇವರೆಲ್ಲ ತಮ್ಮ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆ. ಅದೇ ರೀತಿ ಜಿಲ್ಲೆಯ ಖಾಸಗಿ ಆಸ್ಪತ್ರೆಯವರು ಕೂಡ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆದರೆ ಆಸ್ಪತ್ರೆ ಗಳಲ್ಲಿ ಎಲ್ಲ ವಿಧದ ತುರ್ತು ಚಿಕಿತ್ಸೆಯನ್ನು ವೈದ್ಯರು ನೀಡಲಿದ್ದಾರೆ ಎಂದು ಸಂಘದ ಉಡುಪಿ ಶಾಖೆ ಅಧ್ಯಕ್ಷ ಡಾ.ಉಮೇಶ್ ಪ್ರಭು ತಿಳಿಸಿದ್ದಾರೆ.
ಕರ್ತವ್ಯ ನಿರತ ವೈದ್ಯರ ಮೇಲೆ ನಡೆಸುವ ಈ ರೀತಿಯ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ವಿಧಿಸುವುದಲ್ಲದೆ ಇಂಥ ಘಟನೆ ಮತ್ತೆ ಮತ್ತೆ ನಡೆಯದಂತೆ ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಈ ಮೂಲಕ ವೈದ್ಯರು ಭಯವಿಲ್ಲದೆ ಮುಕ್ತವಾಗಿ ವೃತ್ತಿಯನ್ನು ನಡೆಸಲು ಅನುವು ಮಾಡಿಕೊಡುವಂತಹ ಕಠಿಣ ಕಾನೂನನ್ನು ಸರಕಾರ ಜಾರಿಗೆ ತರಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.