'ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕೆ ಮಹಿಳೆಯರ ಪಟ್ಟು'
![ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕೆ ಮಹಿಳೆಯರ ಪಟ್ಟು ಮದ್ಯ ಮಾರಾಟ ಸಂಪೂರ್ಣ ನಿಷೇಧಕ್ಕೆ ಮಹಿಳೆಯರ ಪಟ್ಟು](/images/placeholder.jpg)
ಬೆಂಗಳೂರು, ನ.7: ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧ, ಹಳ್ಳಿಗಳಲ್ಲಿ ಮದ್ಯ ಮಾರಾಟ ಹಾಗೂ ಅಕ್ರಮ ಮದ್ಯ ಸರಬರಾಜುಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತರಿಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಹಾತ್ಮಗಾಂಧಿ 150 ಜನ್ಮದಿನಾಚರಣೆ ಅಂಗವಾಗಿ ಮದ್ಯಮುಕ್ತ ಕರ್ನಾಟಕಕ್ಕಾಗಿ ಇಂದಿನಿಂದ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ನಗರದ ಸಿಟಿ ರೈಲು ನಿಲ್ದಾಣದ ಬಳಿಯೇ ಧರಣಿ ನಡೆಸಿದ ಪ್ರತಿಭಟನಾಕಾರರು, ಸರಕಾರ ಕೂಡಲೇ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪಾನಮುಕ್ತ ಕರ್ನಾಟಕ ಆಗಬೇಕು ಎಂದು ಹೆಣ್ಣುಮಕ್ಕಳು ಕಳೆದ ಬಾರಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದರು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ, ಏನಕ್ಕೆ ಬಂದಿದ್ದಾರೆ ಎಂದು ವಿಚಾರಿಸಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇದ್ದಾರೆ. ಹೆಣ್ಣು ಮಕ್ಕಳು ಮದ್ಯ ನಿಷೇಧ ಮಾಡಬೇಕು ಎಂದು ಸರಕಾರವನ್ನು ಎಚ್ಚರಿಸಲು ಮುಂದಾಗಿದ್ದಾರೆ ಹೊರತು, ಚಳಿವಳಿ ಮಾಡಲಿಕ್ಕಾಗಿಲ್ಲ. ಆದುದರಿಂದಾಗಿ, ಕೂಡಲೇ ಸಿಎಂ ಪ್ರತಿಭಟನಾ ನಿರತರ ನಿಯೋಗದ ಜತೆ ಸಭೆ ನಡೆಸಬೇಕು ಎಂದರು.
ಪ್ರತಿಭಟನೆ ನಡೆಸಲು ಇಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಮಾಡಿದರೆ ನಮಗೆ ಬೇಕಾದ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ. ಜೈಲಿಗೆ ಬೇಕಾದರೂ ಕಳಿಸಿ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನೇ ಬೀದಿಪಾಲು ಮಾಡುತ್ತಿರುವುದು ಸಲ್ಲ ಎಂದು ಹೇಳಿದರು.
ಈ ಹಿಂದೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಯಡಿಯೂರಪ್ಪ ನಿಮಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅವರೇ ಸಿಎಂ ಆಗಿದ್ದು, ಅವರ ಮಾತನ್ನು ಅವರಿಗೆ ನೆನಪಿಸೋಕೆ ಬಂದಿದ್ದೇವೆ. ಮದ್ಯವನ್ನು ಪೂರ್ಣವಾಗಿ ನಿಷೇಧ ಮಾಡುವುದರಿಂದ ರಾಜ್ಯ ಸರಕಾರಕ್ಕಾಗುವ ಮೂರು ವರ್ಷಕ್ಕಾಗುವ ನಷ್ಟದ ಅರ್ಧ ಹಣ ಕೇಂದ್ರ ಕೊಡಬೇಕಿದೆ ಎಂದು ಆಗ್ರಹಿಸಿದರು.
ಆಂದೋಲನದ ಸಮಿತಿಯ ಸಂಚಾಲಕಿ ಸ್ವರ್ಣ ಭಟ್ ಮಾತನಾಡಿ, ಗ್ರಾಮ ಪಂಚಾಯತಿಗಳು ಗ್ರಾಮ ಸಭೆಯ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳು ಇರಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಅದನ್ನು ಜಾರಿ ಮಾಡಬೇಕು. ಈಗಾಗಲೇ ಗ್ರಾಮ ಸಭೆಗಳಲ್ಲಿ ಕೈಗೊಂಡಿರುವ ನಿರ್ಣಯ ಪಂಚಾಯತ್ಗಳಲ್ಲಿ ತಕ್ಷಣ ಅನುಷ್ಠಾನಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಜನವರಿಯಲ್ಲಿ ಪಾದಯಾತ್ರೆ ನಡೆಸಿದ್ದೆವು. ಆಗ ಸಿಎಂ ಆಗಿದ್ದ ಕುಮಾರಸ್ವಾಮಿ ನಮ್ಮನ್ನು ಅವಮಾನಿಸಿದ್ದರು. ಇದೀಗ ನವೆಂಬರ್ನಲ್ಲಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದೇವೆ. ಈ ಸಂಬಂಧ ಪೊಲೀಸ್ ಇಲಾಖೆಗೂ ಅನುಮತಿಗೆ ಅರ್ಜಿ ಸಲ್ಲಿಸಿದ್ದರೂ, ಅವರು ಅನುಮತಿ ನಿರಾಕರಿಸಿದ್ದಾರೆ ಎಂದರು.
ನಾವಿಲ್ಲಿ ಅಹಿಂಸಾತ್ಮಕ ಹೋರಾಟ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಕೂಡಲೇ ನಮ್ಮ ಹೋರಾಟ ಸಮಿತಿಯ ನಿಯೋಗದೊಂದಿಗೆ ಸಭೆ ನಡೆಸಬೇಕು. ರಾಜ್ಯದಲ್ಲಿ ಮದ್ಯ ನಿಷೇಧ ಕುರಿತು ಚರ್ಚೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಬೇಡಿಕೆಗಳು:
- ಸಂವಿಧಾನದ 73 ನೇ ತಿದ್ದುಪಡಿ ಅನುಷ್ಠಾನಗೊಳಿಸಬೇಕು.
- ಮದ್ಯಮುಕ್ತ ಕರ್ನಾಟಕ ನೀತಿಯನ್ನು ಜಾರಿಗೊಳಿಸಬೇಕು
- ಹಳ್ಳಿಗಳಲ್ಲಿನ ಅಕ್ರಮ ಮದ್ಯ ಮಾರಾಟ ತಕ್ಷಣ ನಿಲ್ಲಿಸಬೇಕು.
- ಪ್ರತಿ ಹಳ್ಳಿಯಲ್ಲಿ ಶೇ.75 ರಷ್ಟು ಮಹಿಳೆಯರನ್ನೊಳಗೊಂಡ ಸಾಮಾಜಿಕ ನ್ಯಾಯ ಸಮಿತಿ ರಚಿಸಬೇಕು.
- ಕುಡಿದು ಮರಣ ಹೊಂದಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕು.