ಜೈಪುರದ ರೆಸಾರ್ಟ್ಗೆ ತೆರಳಿದ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರು
ಬಿಜೆಪಿಯಿಂದ ಕುದುರೆ ವ್ಯಾಪಾರದ ಭೀತಿ
ಹೊಸದಿಲ್ಲಿ, ನ.8: ಕೆಲವು ಶಾಸಕರಿಗೆ ಪಕ್ಷಾಂತರ ಮಾಡಲು ಹಣದ ಆಮಿಷ ಒಡ್ಡಲಾಗಿದೆ ಎಂದು ವರದಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ನ 44 ಶಾಸಕರುಗಳನ್ನು ರಾಜಸ್ಥಾನದ ಜೈಪುರದ ರೆಸಾರ್ಟ್ಗೆ ಕರೆದೊಯ್ಯಲಾಗಿದೆ.
ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಶನಿವಾರ ಕೊನೆಯ ದಿನವಾಗಿದ್ದು, ಬಿಜೆಪಿ ಹಾಗೂ ಶಿವಸೇನೆ ಅಧಿಕಾರ ಹಂಚಿಕೆಗೆ ಸಂಬಂಧಿಸಿ ಇನ್ನೂ ಒಮ್ಮತಕ್ಕೆ ಬಾರದ ಕಾರಣ ಬಿಕ್ಕಟ್ಟು ಮುಂದುವರಿದಿದೆ. ಮಹಾರಾಷ್ಟ್ರದಲ್ಲಿ ಹಿಂದಿನ ವಿಧಾನಸಭೆಯ ಅಧಿಕಾರದ ಅವಧಿ ಶನಿವಾರ ಮುಕ್ತಾಯವಾಗಲಿದ್ದು, ಶುಕ್ರವಾರ ಮಧ್ಯರಾತ್ರಿ ವಿಧಾನಸಭೆ ವಿಸರ್ಜನೆಯಾಗಲಿದೆ.
ಮುಖ್ಯಮಂತ್ರಿ ಪದವಿಗಾಗಿ ಶಿವಸೇನೆ ಬಿಗಿ ಪಟ್ಟು ಮುಂದುವರಿಸಿದ್ದು, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಶುಕ್ರವಾರ ಭೇಟಿಯಾಗಲಿರುವ ಬಿಜೆಪಿಯ ಹಿರಿಯ ನಾಯಕ ನಿತಿನ್ ಗಡ್ಕರಿ ಮನವೊಲಿಸುವ ಸಾಧ್ಯತೆಯಿದೆ.
‘‘ಕಾಂಗ್ರೆಸ್ನ ಎಲ್ಲ ಶಾಸಕರು ಒಟ್ಟಿಗೆ ಇದ್ದಾರೆ. ಯಾವ ಶಾಸಕನೂ ಪಕ್ಷದಿಂದ ಬೇರ್ಪಡುವುದಿಲ್ಲ. ಶಾಸಕರು ಹೈಕಮಾಂಡ್ ಹೇಳಿದ್ದನ್ನು ಪಾಲಿಸಲಿದ್ದಾರೆಂಬ ವಿಶ್ವಾಸ ನನಗಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ಸಿಪಿ)ನಮ್ಮ ಮೈತ್ರಿ ಪಕ್ಷವಾಗಿದ್ದು, ಅದು ನಮ್ಮಿಂದಿಗಿದೆ. ಮಹಾರಾಷ್ಟ್ರವನ್ನು ರಕ್ಷಿಸಲು ಜನತೆ ನಮಗೆ ಮತ ನೀಡಿದ್ದಾರೆ’’ ಎಂದು ಕಾಂಗ್ರೆಸ್ ನಾಯಕ ಹುಸೈನ್ ದಳವಾಯಿ ಹೇಳಿದ್ದಾರೆ.